ಕುಂದಾಪುರ: ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ಗರ್ಭಿಣಿ ಮಹಿಳೆಯೋರ್ವಳ ಅತ್ಯಾಚಾರ, ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಭಿಣಿಯನ್ನು ಕೊಂದ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ ಕುಂದಾಪುರದಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಟಿಸಿದೆ. ಇಲ್ಲಿನ ನ್ಯಾಯಾಧೀಶರಾದ ಪ್ರಕಾಶ್ ಕಂಡೇರಿ ಈ ಐತಿಹಾಸಿಕ ತೀರ್ಪು ನೀಡಿದ್ದಾರೆ.
ಘಟನೆ ವಿವರ:
2015 ಎಪ್ರಿಲ್ 11 ಸಂಜೆ ಹೊತ್ತು ಕುಂದಾಪುರ ತಾಲೂಕಿನ ಗೋಪಾಡಿಯ ಪಡುಗೋಪಾಡಿಯ ಲಿಂಗಜ್ಜಿ ಮನೆ ನಿವಾಸಿ ಇಂದಿರಾ ಎನ್ನುವ ಆರು ತಿಂಗಳ ಗರ್ಭಿಣಿ ಮಹಿಳೆಯನ್ನು ಅಪರಾಧಿ ಪ್ರಶಾಂತ ಮೊಗವೀರ ಮೊದಲು ಇಂದಿರಾ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ದೇವರ ಹುಂಡಿಯಲ್ಲಿದ್ದ ಹಣವನ್ನು ಕದಿಯುತ್ತಾನೆ. ಬಳಿಕ ಹೊರಬರುವಾಗ ಒಂಟಿಯಾಗಿ ಕೊಟ್ಟಿಗೆಯಲ್ಲಿದ್ದ ಇಂದಿರಾ ಕುತ್ತಿಗೆಯಲ್ಲಿದ್ದ ಐದು ಫವನ್ ತೂಕದ ಕರಿಮಣಿ ಸರದ ಮೇಲೆ ಕಣ್ಣು ಹಾಕಿದ ಪ್ರಶಾಂತ ಆಕೆ ಬಳಿ ಹೋಗುತ್ತಾನೆ. ಬಳಿಕ ಇಂದಿರಾ ಅವರನ್ನು ಬಲತ್ಕಾರವಾಗಿ ಅತ್ಯಾಚಾರ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಆಕೆಯ ಕರಿಮಣಿ ಸರವನ್ನು ದೋಚಿ ಪರಾರಿಯಾಗುತ್ತಾನೆ. ಘಟನೆ ವೇಳೆ ಇಂದಿರಾ ಅವರ ಸಹೋದರಿ ಹಾಗೂ ಸಹೋದರಿಯ ಪುತ್ರಿ ಮನೆಯಲ್ಲಿರಲಿಲ್ಲ. ಅವರು ಮನೆಗೆ ಬಂದ ಬಳಿಕ ಘಟನೆ ಬೆಳಕಿಗೆ ಬಂದಿತ್ತು. ಇಂದಿರಾ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಆನಂದ ಅವರ ಪತ್ನಿ.
ಕೊಲೆ ಬಳಿಕ ಎಸ್ಕೇಪ್ ಆಗಿ ಸಿಕ್ಕಿಬಿದ್ದ…
ಕೊಲೆ ನಡೆಸಿದ ಬಳಿಕ ರಕ್ತಸಿಕ್ತ ಬಟ್ಟೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ಪ್ರಶಾಂತ ಆ ಸ್ಥಳದಲ್ಲಿ ಅನುಮಾನಸ್ಪದವಾಗಿ ತಿರುಗಾಡುವುದನ್ನು ಕಣ್ಣಾರೇ ಕಂಡ ಮೂರ್ನಾಲ್ಕು ಜನರಿದ್ದಾರೆ. ಅಲ್ಲದೇ ಇಂದಿರಾ ಮನೆಯ ಅನತಿ ದೂರದವನಾದ ಪ್ರಶಾಂತ್ ಕೊಲೆ ಮಾಡಿ ತೆರಳುವಾಗ ಸಮುದ್ರ ತೀರದಲ್ಲಿ ನಡೆದು ಹೋಗುವ ವೇಳೆ ಕೆಲವರಲ್ಲಿ ಅಲ್ಲೊಂದು ಕೊಲೆಯಾಗಿದೆ ಎಂದು ಹೇಳಿಕೊಂಡಿದ್ದ. ಇದನ್ನೆಲ್ಲಾ ಗಮನಿಸಿ ಅನುಮಾನಗೊಂಡ ಸ್ಥಳೀಯರು ಈ ವಿಚಾರವನ್ನು ಪೊಲೀಸರಿಗೂ ಮುಟ್ಟಿಸಿದ್ದರು. ಅದಾಗಲೇ ಕೊಲೆ ವಿಚಾರವೂ ಬೆಳಕಿಗೆ ಬಂದಿದ್ದು ಈತನೇ ಕೊಲೆಗಾರ ಎಂಬುದು ಮೇಲ್ನೋಟಕ್ಕೆ ಸಾಭೀತಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಬೀಜಾಡಿ-ಗೋಪಾಡಿ ಭಾಗದ ಪೊಲೀಸ್ ಬೀಟ್ ಸಿಬ್ಬಂದಿ ವೆಂಕಟರಮಣ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಬಳಿಕ ಕುಂದಾಪುರ ಸಿಪಿಐ ಹಾಗೂ ಈ ಪ್ರಕರಣದ ತನಿಖಾಧಿಕಾರಿ ದಿವಾಕರ್ ಪಿ.ಎಮ್ ಅವರೆದುರು ಹಾಜರುಪಡಿಸಿದ್ದರು.
ಡ್ರಾಮಾ ಮಾಡಿ ‘ತಗಲಾಕಿಕೊಂಡ’!
ಈತನೇ ಆರೋಪಿಯೆಂಬುದು ತನಿಖಾಧಿಕಾರಿಗಳಿಗೆ ತಿಳಿದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಕೆಲ ತಿಂಗಳ ನಂತರ ಹೊಸದೊಂದು ನಾಟಕ ಆರಂಭಿಸಿದ ಪ್ರಶಾಂತ್ ತಾನು ನ್ಯಾಯಾಧೀಶರ ಎದುರು ಎಲ್ಲಾ ಸತ್ಯ ಬಾಯ್ಬಿಡುವುದಾಗಿ ಹೇಳಿದ್ದ. ಅದರಂತೆಯೇ ಉಡುಪಿ ನ್ಯಾಯಾಲಯದಲ್ಲಿ ಆತನನ್ನು ಹಾಜರು ಮಾಡಿದ್ದು ಆತ ನ್ಯಾಯಾಧೀಶರೆದುರು ದೊಡ್ಡ ಡ್ರಾಮಾ ಮಾಡಿದ್ದ. ‘ನಾನು ಅಂದು ಅಲ್ಲಿ ಕದಿಯಲು ಹೋಗಿದ್ದೆ. ಅದೇ ವೇಳೆ ಮೂವರು ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು. ಆಕೆಯನ್ನು ಬಚಾವ್ ಮಾಡಲು ಹೋದಾಗ ನನ್ನ ಬಟ್ಟೆಗೆ ರಕ್ತದ ಕಲೆಗಳು ಆಗಿದೆ. ನಾನು ಕೊಲೆಗಾರನಲ್ಲಎಂದು ಹೇಳಿ ತನ್ನ ವಿರುದ್ಧ ಸಾಕ್ಷ್ಯ ನುಡಿದ ಮೂವರ ಮೇಲೆ ಆರೋಪ ಹೊರಿಸಿದ್ದ. ಇದೆಲ್ಲವೂ ನ್ಯಾಯಾಧೀಶರ ಎದುರೇ ನಡೆದಿದ್ದು ಈತನೇ ಒಂದು ಹಂತದಲ್ಲಿ ತಪ್ಪೊಪ್ಪಿಗೆ ನೀಡಿದಂತಾಗಿತ್ತು.
ಪಾಪಿ ಪ್ರಶಾಂತನ ವಿರುದ್ಧವೇ ಇತ್ತು ಸಾಕ್ಷ್ಯಗಳು…
ಪ್ರಕರಣದಲ್ಲಿ ಈತನದ್ದು ಮಾತ್ರವೇ ಕೈವಾಡವಿತ್ತೆಂಬುದು ತಿಳಿಯುವುದು ತುಂಬಾ ಕಷ್ಟದ ಕೆಲಸವಾಗಿರಲಿಲ್ಲ. ಘಟನೆ ನಡೆದ ಸಂದರ್ಭ ಈತನನ್ನು ಕಂಡ ಅನೇಕ ಮಂದಿ ಇದ್ದರು. ಇಂದಿರಾಳ ಶವ ಪರೀಕ್ಷೆ ಮಾಡುವಾಗ ಕೆನ್ನೆ, ತುಟಿ, ಎದೆ, ಹಾಗೂ ಕೆಲವು ಭಾಗಗಲಲ್ಲಿ ಕಚ್ಚಿದ ಗಾಯಗಳಿತ್ತು. ಅದು ಪ್ರಶಾಂತ್ ಹಲ್ಲು ತಾಕಿ ಆದ ಗಾಯಗಳಾಗಿತ್ತು. ಒಟ್ಟು 46 ಗಾಯಗಳು ಇಂದಿರಾ ದೇಹದಲ್ಲಿತ್ತು. ಇನ್ನು ಪ್ರಶಾಂತ್ ಮೈಮೇಲೂ ಅಲ್ಲಲ್ಲಿ ಪರಚಿದ ಗಾಯಗಳಾಗಿದ್ದವು. ಇದೆಲ್ಲವೂ ಆರೋಪಿ ಪ್ರಶಾಂತ್ ಅಪರಾಧಿಯೆಂಬುದನ್ನು ಸಾರಿಸಾರಿ ಹೇಳುವಂತಿತ್ತು. ಇನ್ನು ಆತ ನ್ಯಾಯಾಧೀಶರೆದುರು ತಪ್ಪೊಪ್ಪಿಕೊಂಡು ಮಾಡಿದ ಎಡವಟ್ಟು ಕೂಡ ದಾಖಲಾಗಿತ್ತು. ಒಟ್ಟು 23 ಸಾಕ್ಷ್ಯಾಧಾರಗಳ ವಿಚಾರಣೆ ನಡೆದಿತ್ತು. ಅಂದಿನ ಕುಂದಾಪುರ ಸಿಪಿಐ ದಿವಾಕರ್ ಚಾರ್ ಶೀಟ್ ಸಲ್ಲಿಸಿದ್ದರು. ಅಂದಿನ ಎಸ್ಪಿ ಕೆ. ಅಣ್ಣಾಮಲೈ ಅವರು ಕೂದ ಖುದ್ದು ಇಂದಿರಾ ಮನೆಗೆ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಮಾಹಿತಿ ಹಾಗೂ ಆಧಾರಗಳನ್ನು ಸಂಗ್ರಹಿಸುವಲ್ಲಿಯೂ ಪೊಲೀಸರ ಶ್ರಮ ಇಲ್ಲಿ ಮೆಚ್ಚಲೇಬೇಕಾದ ಸಂಗತಿ.
ಐತಿಹಾಸಿಕ ತೀರ್ಪು ನೀಡಿದ ಕೋರ್ಟ್…
ಪ್ರಕರಣದ ಗಂಭೀರತೆಯನ್ನು ಅರಿತು ಘನ ನ್ಯಾಯಾಲಯವು ಆರೋಪಿಗೆ ಜಾಮೀನು ನಿರಾಕರಣೆಯನ್ನು ಮಾಡಿತ್ತು. ಆದ್ದರಿಂದ ಆರೋಪಿ ಬಂಧನವಾದ ದಿನದಿಂದಲೂ ಜೈಲಿನಲ್ಲಿದ್ದ. ಪ್ರಶಾಂತನ ಮೇಲೆ ಹೊರಿಸಲಾಗಿದ್ದ ಕೊಲೆ, ಅತ್ಯಾಚಾರ, ದರೋಡೆ, ಮನೆಗೆ ಅಕ್ರಮ ಪ್ರವೇಶ ಸೇರಿದಂತೆ ಇತರೆ ಕೆಲವು ಪ್ರಕರಣಗಲಲ್ಲಿಯೂ ಇತನೇ ದೋಷಿಯೆಂದು ನ್ಯಾಯಾಲಯ ತೀರ್ಪನ್ನಿತ್ತಿದೆ. ಇದೊಂದು ಅಪರೂಪದ ಹಾಗೂ ಅಮಾನುಷ ಪ್ರಕರಣವೆಂದು ಹೇಳಲಾಗುತ್ತಿದೆ. ಸೆಕ್ಷನ್ 448ಕ್ಕೆ 1 ವರ್ಷ ಕಠಿಣ ಸಜೆ 1 ಸಾವಿರ ದಂಡ, ಸೆಕ್ಷನ್ 451ಕ್ಕೆ 4 ವರ್ಷ ಸಜೆ 2 ಸಾವಿರ ದಂಡ, ಸೆಕ್ಷನ್ 396ಕ್ಕೆ 10 ವರ್ಷ ಕಠಿಣ ಸಜೆ 30 ಸಾವಿರ ದಂಡ, ಸೆಕ್ಷನ್ 376ಕ್ಕೆ 10 ವರ್ಷ ಕಠಿಣ ಸಜೆ 40 ಸಾವಿರ ದಂಡ, ಇನ್ನು ಗರ್ಭಿಣಿ ಮಹಿಳೆ ಕೊಲೆ ಜೊತೆ 5 ತಿಂಗಳ ಭ್ರೂಣದ ಸಾವಿಗೆ ಕಾರಣವಾಗಿದ್ದಕ್ಕೆ ಸೆಕ್ಷನ್ 302 ಅಡಿಯಲ್ಲಿ ಮರಣದಂಡನೆ ವಿಧಿಸಿ ತೀರ್ಪು ನೀಡಲಾಗಿದೆ. ಈ ತೀರ್ಪು ಐತಿಹಾಸಿಕ ತೀರ್ಪು ಎಂದು ಬಣ್ಣಿಸಲಾಗುತ್ತಿದೆ.
ಪೆನ್ ಎಸೆದ ನ್ಯಾಯಾಧೀಶರು…
ಮರಣದಂಡನೆ ಅಥವಾ ಗಲ್ಲು ಶಿಕ್ಷೆ ನೀಡಿದ ಬಳಿಕ ಪೆನ್ ನಿಬ್ ಮುರಿಯುದುದು ಸಾಮಾನ್ಯ ಪ್ರಕ್ರಿಯೆ. ಆದರೇ ಈತನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದ ನ್ಯಾಯಾಧೀಶರು ಪೆನ್ ಎಸೆದರು. ಗರ್ಭಿಣಿ ಅತ್ಯಾಚಾರ ಜೊತೆಗೆ ಆಕೆಯ ಕೊಲೆ ಹಾಗೂ ಭ್ರೂಣದ ಹತ್ಯೆಗೂ ಕಾರಣನಾದ ಇಂತಹ ಅಪರಾಧಿಗೆ ಮರಣದಂಡನೆ ಹೊರತು ಬೇರ್ಯಾವ ಶಿಕ್ಷೆ ನೀಡಿದರೂ ಇಂದಿರಾ ಆತ್ಮಕ್ಕೆ ಶಾಂತಿ ಸಿಗದು ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಗಳಗಳನೆ ಅತ್ತ ಪ್ರಶಾಂತ್..!
ಕೋರ್ಟ್ ಆಗಮಿಸಿದ ಪ್ರಶಾಂತ್ ಒಳಗೆ ಬಂದು ಕಟಕಟೆಯಲ್ಲಿ ನ್ಯಾಯಾಧೀಶರ ತೀರ್ಪನ್ನೆ ಆಲಿಸುತ್ತಾ ನಿಂತಿದ್ದ. ಒಂದೊಂದು ಪ್ರಕರಣಕ್ಕೂ ಶಿಕ್ಷೆಯ ಪ್ರಮಾಣ ಘೋಷಿಸಿ ಬಳಿಕ ಕೊಲೆ ಪ್ರಕರಣಕ್ಕೆ ಮರಣದಂಡನೆ ವಿಧಿಸುತ್ತಲೇ ಪ್ರಶಾಂತ್ ಭಾವುಕನಾದ. ಬಳಿಕ ಕೋರ್ಟ್ ಹೊರಭಾಗದ ಬೆಂಚಿನಲ್ಲಿಯೂ ಅಳುತ್ತಾ ತಲೆ ಕೆಳ ಹಾಕಿ ಕುಳಿತ ಪ್ರಶಾಂತ್ ತಲೆ ಎತ್ತಲೇ ಇಲ್ಲ.
ರವಿಕಿರಣ್ ಮುರ್ಡೇಶ್ವರ್ ಬಗ್ಗೆ ಪ್ರಶಂಸೆ..
ಕೊಲೆಯಾದ ಇಂದಿರಾ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇಂದಿರಾ ಕುಟುಂಬಿಕರ ಹಾಗೂ ಹೋರಾಟಗಾರ್ತಿ ರಾಧಾದಾಸ್ ಮೊದಲಾದವರ ಆಪೇಕ್ಷೆ ಮೇರೆಗೆ ಈ ಪ್ರಕರಣವನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರನ್ನು ನಿಯೋಜಿಸಲಾಗಿತ್ತು. ಇಂದು ತೀರ್ಪು ಹೊರಬೀಳುತ್ತಲೇ ಜನರು ಹಾಗೂ ಇಂದಿರಾ ಕುಟುಂಬಿಕರು ನ್ಯಾಯವಾದಿ ರವಿಕಿರಣ್ ಅವರ ಕಾರ್ಯವನ್ನು ಪ್ರಶಂಸಿದರು.
ನ್ಯಾಯಾಲಯದೆದುರು ಜನರ ದಂಡು
ಘಟನೆ ನಡೆದ ದಿನದಿಂದಲೂ ಕೊಲೆಗಾರ, ನಟೋರಿಯಸ್ ಪ್ರಶಾಂತನ ಬಗ್ಗೆ ಆಕ್ರೋಷ ವ್ಯಕ್ತವಾಗಿತ್ತು. ಆತನಿಗೆ ಉಘ್ರ ಶಿಕ್ಷೆಯಾಗಬೇಕೆಂಬ ಆಗ್ರಹಗಳು ಕೇಳಿಬಂದಿತ್ತು. ಆತನಿಗೆ ಮರಣದಂಡನೆ ಶಿಕ್ಷೆಯೇ ಆಗಬೇಕೆಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬ್ಂದಿತ್ತು. ಇಂದಿರಾ ಗಂಡ, ಮಗು ಹಗೂ ಕುಟುಂಬಿಕರು ಸೇರಿದಂತೆ ಗೋಪಾಡಿ ಭಾಗದ ಜನರು ನ್ಯಾಯಲೆಯದೆದುರು ಜಮಾಯಿಸಿದ್ದರು. ತೀರ್ಪು ಬರುತ್ತಲೇ ಎಲ್ಲರೂ ಖ್ಹುಷಿಪಟ್ಟರು.
ಇಂದಿರಾಳ ಕೊಲೆಗೆ ಕಾರಣನಾದ ಪ್ರಶಾಂತನಿಗೆ ಮರಣ ದಂಡನೆಯಾಗಿದ್ದು ಸರಿ. ಆತ ಬದುಕಲು ಅರ್ಹನಲ್ಲ. ಆಕೆ ಇಲ್ಲವೆಂಬ ನಡುವೆಯೂ ಪ್ರಶಾಂತನಿಗೆ ಆದ ಶಿಕ್ಷೆ ಖುಷಿಕೊಟ್ಟಿದೆ. ನ್ಯಾಯ ಗೆದ್ದಿದೆ.
– ಆನಂದ್ (ಇಂದಿರಾ ಪತಿ)
(ಚಿತ್ರ, ವರದಿ- ಯೋಗೀಶ್ ಕುಂಭಾಸಿ )
ಇದನ್ನೂ ಓದಿರಿ:
ನೀರು ಕೇಳಿ ಜೀವವನ್ನೇ ತೆಗೆದ ಯುವಕ; ಅರೆಸ್ಟ್ ಆಗಿರುವ ಕ್ರಿಮಿನಲ್ ಹಿನ್ನೆಲೆಯ ಕಾಮುಕ
ಗೋಪಾಡಿ: ಹಾಡಹಗಲೇ ಮಹಿಳೆಯ ಭೀಕರ ಕೊಲೆ; ಅತ್ಯಾಚಾರ ನಡೆಸಿ ಕೊಲೆ ಶಂಕೆ; ಶಂಕಿತ ಆರೋಪಿಯ ಬಂಧನ
ಗೋಪಾಡಿ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ: ನ್ಯಾಯಕ್ಕಾಗಿ ಬೀದಿಗಿಳಿದ ಮಹಿಳೆಯರು
ಇಂದಿರಾ ಮನೆಗೆ ಶೋಭಾ ಕರಂದ್ಲಾಜೆ ಭೇಟಿ : ಸಮಗ್ರ ತನಿಖೆಗೆ ಭರವಸೆ
ಕರಾವಳಿಯನ್ನೇ ಬೆಚ್ಚಿಬೀಳಿಸಿದ ಗೋಪಾಡಿಯ ಗರ್ಭಿಣಿ ಮಹಿಳೆ ಕೊಲೆಗೆ ಒಂದು ವರ್ಷದ ಕರಾಳ ನೆನಪು
ಗೋಪಾಡಿಯ ಇಂದಿರಾ ಕೊಲೆ ಪ್ರಕರಣ; ಮೃತಳ ಮನೆಗೆ ಸಚಿವ ಸೊರಕೆ, ಶಾಸಕ ಹಾಲಾಡಿ ಭೇಟಿ; ಸಚಿವರಿಂದ ಪರಿಹಾರದ ಭರವಸೆ
http://ಗೋಪಾಡಿಯಲ್ಲಿ ಕೊಲೆಯಾದ ಗರ್ಭಿಣಿ ಮಹಿಳೆ ಇಂದಿರಾ ಮನೆಗೆ ಉಡುಪಿ ಎಸ್ಪಿ ಭೇಟಿ; ನಿಸ್ಪಕ್ಷಪಾತ ತನಿಖೆಯ ಭರವಸೆ
ಬೆಚ್ಚಿಬೀಳಿಸಿದ ಗರ್ಭಿಣಿ ರೇಪ್ಮ ರ್ಡರ್ ಕೇಸ್: ಹಂತಕನಿಗೆ ಶಿಕ್ಷೆ ಖಚಿತ; ಫೆ.20ಕ್ಕೆ ಶಿಕ್ಷೆ ಪ್ರಕಟ
Comments are closed.