ಆರೋಗ್ಯ

ಅಮಲು ಪಧಾರ್ಥ ಸೇವನೆ ಮನೋದೈಹಿಕ ಸ್ಥಿತಿಯನ್ನು ಹದಗೆಡುತ್ತದೆ.

Pinterest LinkedIn Tumblr

drugs_metal_destroing

ಮಂಗಳೂರು: ಅಮಲಿನ ಗೀಳು ಮಾನಸಿಕ, ವೈದ್ಯಕೀಯ, ಕೌಟುಂಬಿಕ ಹಾಗೂ ಸಾಮಾಜಿಕ-ರಾಜಕೀಯ ಸಮಸ್ಯೆಯೇ ಹೊರತು ನೈತಿಕ, ಸಾಂಸ್ಕತಿಕ ಯಾ ಧಾರ್ಮಿಕ ಸಮಸ್ಯೆಯಲ್ಲ. ವಿಶ್ವ ಸಂಸ್ಥೆಯ ವರದಿಯಂತೆ ಸುಮಾರು 23 ಕೋಟಿ ಜನ (ವಿಶ್ವ ಜನಸಂಖ್ಯೆಯ ಶೇ. 5ರಷ್ಟು) ಕನಿಷ್ಠ ಒಮ್ಮೆಯಾದರೂ ಮಾದಕ ವಸ್ತುಗಳನ್ನು ಸೇವಿಸಿದ್ದು, ವರ್ಷಕ್ಕೆ ಸುಮಾರು ಎರಡು ಲಕ್ಷ ಜನ ಆ ಗೀಳಿನಿಂದ ಸಾವನ್ನಪ್ಪುತ್ತಿದ್ದಾರೆ. ಮಾದಕ ದ್ರವ್ಯಗಳ ವಾರ್ಷಿಕ ವಹಿವಾಟು 500 ಶತಕೋಟಿ ಡಾಲರುಗಳಿಗೂ ಮಿಕ್ಕಿದ್ದರೆ, ಗೀಳುಳ್ಳವರೆಲ್ಲರಿಗೂ ಚಿಕಿತ್ಸೆಯನ್ನು ನೀಡುವುದಕ್ಕೆ ವರ್ಷಕ್ಕೆ 250 ಶತಕೋಟಿ ಡಾಲರುಗಳಷ್ಟು ಅಗತ್ಯವಿದ್ದು, ಐವರಲ್ಲೊಬ್ಬರಷ್ಟೇ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಹಲವು ಬಗೆಯ ಮಾದಕ ವಸ್ತುಗಳ ಉತ್ಪಾದನೆ ಹಾಗೂ ಮಾರಾಟಗಳು ಹೆಚ್ಚುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಶಾಲಾ ಮಕ್ಕಳನ್ನೂ ತಟ್ಟುತ್ತಿದೆ.

ಅಮಲಿನ ಗೀಳು ಹತ್ತಿಕೊಳ್ಳುವುದಕ್ಕೆ ಒಂದಲ್ಲ, ಹಲವು ಕಾರಣಗಳಿರುತ್ತವೆ. ನ್ಯೂಜಿಲೆಂಡಿನ ಮನಃಶಾಸ್ತ್ರಜ್ಞ ಡಗ್ಲಸ್ ಸೆಲ್ಮನ್ ಹೇಳುವಂತೆ, ಅಮಲಿನ ಗೀಳು ಪದೇ ಪದೇ ಮರುಕಳಿಸುವ ದೀರ್ಘಾವಧಿಯ ಕಾಯಿಲೆ (ಅಡಿಕ್ಷನ್, 2009;105:6-13). ವ್ಯಕ್ತಿಯ ಮನಸ್ಥಿತಿ, ಅಮಲು ಪದಾರ್ಥಗಳ ಸುಲಭ ಲಭ್ಯತೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಪರಿಸರಗಳೆಲ್ಲವೂ ಅದಕ್ಕೆ ಕಾರಣವಾಗುತ್ತವೆ. ಸುತ್ತುಮುತ್ತಲಿನ ಪ್ರಚೋದನೆಗಳಿಂದಾಗಿ ಪ್ರತಿಕ್ಷಣವೂ ಹಲಬಗೆಯ ಬಯಕೆಗಳು ನಮ್ಮ ಮೆದುಳಿನೊಳಗಡೆ ಸುಪ್ತವಾಗಿ ಹುಟ್ಟುತ್ತಿರುತ್ತವೆ. ಇವುಗಳಲ್ಲಿ ಅನಗತ್ಯವಾದುದನ್ನೂ, ಅಸಂಗತವಾದುದನ್ನೂ ನಮ್ಮ ಮುಮ್ಮೆದುಳು ಪ್ರಜ್ಞಾಪೂರ್ವಕವಾಗಿ ಅದುಮುತ್ತದೆ; ಆದರೆ ಈ ಅದುಮುವಿಕೆ ತಡವಾದರೆ ಬಯಕೆಗೆ ಸೋಲುವಂತಾಗುತ್ತದೆ. ಅಮಲು ಪದಾರ್ಥಗಳು ಮಾತ್ರವಲ್ಲ, ಶರಾಬು, ತಂಬಾಕು ಇತ್ಯಾದಿ ಚಟಗಳಿಗೆ ತುತ್ತಾಗಿರುವವರಲ್ಲಿ ಮುಮ್ಮೆದುಳಿನ ಈ ಅದುಮುವಿಕೆಯು ನಿಧಾನವಾಗಿರುವುದನ್ನು ಗುರುತಿಸಲಾಗಿದ್ದು, ಇದು ವಂಶಪಾರಂಪರ್ಯವಾಗಿ ಬರಬಹುದೆಂದು ಹೇಳಲಾಗಿದೆ.

ಹಾಗೆಯೇ, ಮೂರನೇ ಎರಡರಷ್ಟು ಅಮಲು ವ್ಯಸನಿಗಳ ಕುಟುಂಬದ ಇತರ ಸದಸ್ಯರು ಶರಾಬು, ತಂಬಾಕು ಯಾ ಮಾದಕ ದ್ರವ್ಯಗಳಂತಹ ಒಂದಿಲ್ಲೊಂದು ಚಟವನ್ನು ಹೊಂದಿರುತ್ತಾರೆನ್ನುವುದು ಹಲವು ಅಧ್ಯಯನಗಳಲ್ಲಿ ವ್ಯಕ್ತವಾಗಿದೆ. ಹೆಚ್ಚಿನ ವ್ಯಸನಿಗಳಲ್ಲಿ ತೀವ್ರ ಖಿನ್ನತೆ ಮತ್ತಿತರ ಮಾನಸಿಕ ತೊಂದರೆಗಳು, ಜೀವನವನ್ನು ಎದುರಿಸುವಲ್ಲಿ ಭಯ ಮತ್ತು ಆತಂಕಗಳು, ವೈಫಲ್ಯಗಳಿಂದಾದ ಹತಾಶೆಗಳು ಇತ್ಯಾದಿ ಜೊತೆಗೂಡಿರುತ್ತವೆ. ಮಿತ್ರರ ಒತ್ತಡಗಳು, ಏನೆಂದು ನೋಡಿ ಬಿಡಬೇಕೆನ್ನುವ ಕುತೂಹಲ, ಲೈಂಗಿಕ ಶಕ್ತಿಯನ್ನು ಪ್ರಚೋದಿಸಬಹುದೆನ್ನುವ ತಪ್ಪು ಕಲ್ಪನೆಗಳು ಕೂಡಾ ಅಮಲು ದ್ರವ್ಯದ ಮೊದಲ ಬಳಕೆಗೆ ಕಾರಣವಾಗಬಹುದು. ಹೀಗೆ ಪ್ರಕೃತಿ ಮತ್ತು ಪರಿಸರಗಳೆಲ್ಲಕ್ಕೂ ಸಂಬಂಧಿಸಿದ ಹಲವು ಕಾರಣಗಳಿಂದಾಗಿ ವ್ಯಕ್ತಿಯು ಮಾದಕ ವಸ್ತುಗಳ ಬಳಕೆಯನ್ನು ಆರಂಭಿಸುವಂತಾಗುತ್ತದೆ.

ಒಮ್ಮೆ ಇಂತಹ ಚಟಜನಕ ವಸ್ತುಗಳನ್ನು ಸೇವಿಸಲಾರಂಭಿಸಿದರೆ, ಮೆದುಳಿನ ಮೇಲೆ ಅವು ಬೀರುವ ಪರಿಣಾಮದಿಂದಾಗಿ ಅವನ್ನು ಮತ್ತೆ ಮತ್ತೆ ಸೇವಿಸುವ ಬಯಕೆಯುಂಟಾಗುತ್ತದೆ, ಅದು ಗೀಳಾಗಿ ಬೆಳೆದು ವಿಷವರ್ತುಲವಾಗುತ್ತದೆ. ಈ ವಸ್ತುಗಳು ದೇಹದ ಮೇಲೂ ಪರಿಣಾಮ ಬೀರಿ, ಅವನ್ನು ಸೇವಿಸದಿದ್ದಾಗ ವಿಪರೀತ ತೊಂದರೆಗಳಿಗೆ ಕಾರಣವಾಗಿ ಚಟವುಳ್ಳವನನ್ನು ವಸ್ತುಶಃ ದಾಸ್ಯಕ್ಕೆ ತಳ್ಳುತ್ತವೆ. ಅವನ್ನು ಹೇಗಾದರೂ ಪಡೆದು ಸೇವಿಸುವ ಬಲವಂತಕ್ಕೆ ಸಿಕ್ಕಾಗ ಕಳ್ಳತನದಿಂದ ಹಿಡಿದು ಕೊಲೆಗಳಂತಹ ಅಪರಾಧಗಳಿಗೂ ಇದು ಕಾರಣವಾಗಬಹುದು.

ಹೀಗೆ ಒಂದು ಕ್ಷಣಿಕ ಬಯಕೆಗೆ ಸೋತು ಸೇವಿಸಲಾರಂಭಿಸಿದರೆ ಅಮಲಿನ ದಾಸನಾಗಿ ಒದ್ದಾಡಬೇಕಾಗುತ್ತದೆ. ಅಮಲು ಪದಾರ್ಥಗಳೂ, ತಕ್ಕ ಹಣವೂ ಸುಲಭದಲ್ಲಿ ದೊರೆಯುವಂತಿದ್ದರೆ ಗೀಳು ಇನ್ನಷ್ಟು ಗಟ್ಟಿಯಾಗುತ್ತದೆ. ಇಂದು ಪಂಜಾಬ್ ರಾಜ್ಯದಲ್ಲಿ ಅಮಲಿನ ಗೀಳು ಅತಿ ಗಂಭೀರವಾದ ಮಟ್ಟವನ್ನು ತಲುಪಿದ್ದು, ಅಲ್ಲಿನ ಶೇ.67ರಷ್ಟು ಕುಟುಂಬಗಳಲ್ಲಿ ಒಬ್ಬರಾದರೂ ಈ ಪಿಡುಗಿಗೆ ತುತ್ತಾಗಿದ್ದರೆನ್ನಲಾಗಿದೆ.

ಪಂಜಾಬಿನ ಮೂಲೆ ಮೂಲೆಗಳಲ್ಲಿಂದು ಮಾದಕ ವಸ್ತುಗಳು ಎಗ್ಗಿಲ್ಲದೆ ಮಾರಲ್ಪಡುತ್ತಿರುವುದಷ್ಟೇ ಅಲ್ಲ, ಅಮಲುಂಟು ಮಾಡುವ ವಿವಿಧ ಔಷಧಗಳನ್ನು ವೈದ್ಯರ ಚೀಟಿಗಳಿಲ್ಲದೆಯೇ ಮಾರುವ ಔಷಧದಂಗಡಿಗಳು ಪ್ರತೀ ಹಳ್ಳಿಯಲ್ಲೂ ಹತ್ತಿಪ್ಪತ್ತರಂತೆ ಕಾರ್ಯಾಚರಿಸುತ್ತಿವೆ. ಹಾಗಿದ್ದರೂ, ಇವನ್ನು ನಿಯಂತ್ರಿಸಬೇಕಾದ ಇಲಾಖೆಗಳೆಲ್ಲ ಕಣ್ಮುಚ್ಚಿಕೊಂಡಂತಿವೆ. ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಇರಾನ್ ಗಳಿಂದ ಪಂಜಾಬ್-ಮುಂಬೈ ಮಾರ್ಗವಾಗಿ ಜಗತ್ತಿನ ಇತರೆಡೆಗಳಿಗೆ ಕಳ್ಳ ಸಾಗಾಣಿಕೆಯಾಗುವ ಅಫೀಮು ಇತ್ತೀಚಿನ ವರ್ಷಗಳಲ್ಲಿ ಪಂಜಾಬಿನಲ್ಲೇ ಸೋರಿಕೆಯಾಗುತ್ತಿದ್ದು, ಕಾನೂನು ಪಾಲಕರೇ ಇದರಲ್ಲಿ ಶಾಮೀಲಾಗಿ, ಸಿಕ್ಕಿ ಬಿದ್ದ ಅಫೀಮಿನಲ್ಲಿ ಸಾಕಷ್ಟನ್ನು ಸ್ಥಳೀಯ ಮಾರುಕಟ್ಟೆಗೆ ದಾಟಿಸುತ್ತಿದ್ದಾರೆಂಬ ಬಲವಾದ ಆರೋಪಗಳಿವೆ.

ಪಂಜಾಬಿನ ರಾಜಕೀಯ ಪಕ್ಷಗಳೂ ಇದರಲ್ಲಿ ಸೇರಿಕೊಳ್ಳುತ್ತಿದ್ದು, ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಮತದಾರರನ್ನು ಓಲೈಸುವುದಕ್ಕಾಗಿ ಮಾದಕ ವಸ್ತುಗಳನ್ನೂ ವಿತರಿಸಲಾಗಿತ್ತೆನ್ನುವ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಇವರೆಲ್ಲರ ಸ್ವಾರ್ಥಗಳಲ್ಲಿ ಪಂಜಾಬಿನ ಯುವ ಜನಾಂಗವೇ ನಾಶವಾಗುವ ಭೀತಿ ಎದುರಾಗಿದ್ದು, ಮಕ್ಬೂಲ್ ಪುರದಂತೆಡೆ ವಿಧವೆಯರ ಹಳ್ಳಿಗಳೆಂಬ ಶೋಚನೀಯ ಸ್ಥಿತಿಯುಂಟಾಗಿದೆ.

ಅಮಲಿನ ಗೀಳು ದೀರ್ಘಕಾಲ ತಜ್ಞ ಚಿಕಿತ್ಸೆಯ ಅಗತ್ಯವುಳ್ಳ ಕಾಯಿಲೆಯಾಗಿದ್ದು, ಶಾಶ್ವತವಾಗಿ ಮುಕ್ತರಾಗುವುದಕ್ಕೆ ಸತತ ಪ್ರಯತ್ನಗಳು ಬೇಕಾಗುತ್ತವೆ. ಸೆಲ್ಮನ್ ಹೇಳುವಂತೆ, ಮಧುಮೇಹ, ರಕ್ತದ ಏರೊತ್ತಡ, ಅಸ್ತಮಾ ಮುಂತಾದ ದೀರ್ಘಕಾಲೀನ ಕಾಯಿಲೆಗಳು ನಿರಂತರವಾದ ಚಿಕಿತ್ಸೆಯಿಲ್ಲದಿದ್ದರೆ ಆಗಾಗ ಮರುಕಳಿಸುವಂತೆಯೇ ಅಮಲಿನ ಗೀಳು ಕೂಡಾ ಶಿಸ್ತುಬದ್ಧವಾದ ಚಿಕಿತ್ಸೆಯಿಲ್ಲದಿದ್ದರೆ ಮರುಕಳಿಸುತ್ತಿರುತ್ತದೆ. ಆದರೆ ಮಧುಮೇಹದಂತಹ ರೋಗಗಳ ಚಿಕಿತ್ಸೆಗೆ ಸೌಲಭ್ಯಗಳೂ, ಸಾಮಾಜಿಕ ಮತ್ತು ಕೌಟುಂಬಿಕ ಸಹಾನುಭೂತಿ ಹಾಗೂ ಪ್ರೋತ್ಸಾಹಗಳೂ ವಿಪುಲವಾಗಿದ್ದರೆ, ಅಮಲು ರೋಗದ ಪಾಲಿಗೆ ತದ್ವಿರುದ್ಧವಾದ ಪರಿಸ್ಥಿತಿಯಿದೆ.

ಅಮಲುಳ್ಳವರ ಮನೋದೈಹಿಕ ಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸಿ, ಅವರಲ್ಲಿರಬಹುದಾದ ಮನೋರೋಗಗಳೂ ಸೇರಿದಂತೆ ಎಲ್ಲಕ್ಕೂ ಸೂಕ್ತವಾದ, ಸಂಕೀರ್ಣವಾದ ಚಿಕಿತ್ಸೆಯನ್ನು ನೀಡುವುದಕ್ಕೆ ನುರಿತ ಮನಃಶಾಸ್ತ್ರಜ್ಞರಿಗಷ್ಟೇ ಸಾಧ್ಯವಿದೆ. ಹೆಚ್ಚಿನವರಿಗೆ ಈ ಅರಿವಿಲ್ಲದಿರುವುದು ಒಂದು ಸಮಸ್ಯೆಯಾದರೆ, ಅಂತಹಾ ತಜ್ಞರ ಕೊರತೆಯು ತೀವ್ರವಾಗಿರುವುದು ಇನ್ನೊಂದು ಸಮಸ್ಯೆಯಾಗಿದೆ. ಇದರ ದುರ್ಲಾಭ ಪಡೆದು ಅನೇಕ ನಕಲಿ-ಬದಲಿ ಗೀಳು ನಿರ್ಮೂಲನಾ ಕೇಂದ್ರಗಳು ಎಲ್ಲೆಂದರಲ್ಲಿ ತಲೆಯೆತ್ತುತ್ತಿದ್ದು, ಅವುಗಳಿಂದ ತೊಂದರೆಯಾಗುವುದಷ್ಟೇ ಅಲ್ಲದೆ, ಕೆಲವೆಡೆ ಅಮಲು ಪದಾರ್ಥಗಳ ಸರಬರಾಜು ಕೂಡಾ ನಡೆಯುತ್ತವೆ. ಅಮಲಿನ ಗೀಳುಳ್ಳವರನ್ನು ತುಚ್ಛವಾಗಿ ಕಾಣುವುದು, ನೈತಿಕತೆಯ ಹೆಸರಲ್ಲಿ ಅವರ ಮೇಲೆ ದಾಳಿ ಮಾಡುವುದು, ಕುಟುಂಬದಿಂದಲೂ, ಸಮಾಜದಿಂದಲೂ ಅವರನ್ನು ದೂರವಿರಿಸುವುದು ಇತ್ಯಾದಿಗಳಿಂದ ಇನ್ನಷ್ಟು ಕೀಳರಿಮೆಗೂ, ಖಿನ್ನತೆಗೂ ಕಾರಣವಾಗಿ ಗೀಳಿನ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಬಹುದು. ಪಂಜಾಬಿನಲ್ಲಿ ಅಮಲಿನ ಗೀಳಿರುವವರನ್ನು ಅಡ್ಡ ಹೆಸರಿಂದ ಹೀಗಳೆಯುವುದಲ್ಲದೆ, ಎಲ್ಲೇ ಯಾವುದೇ ಅಪರಾಧವಾದರೂ ಅವರನ್ನೇ ಠಾಣೆಗೊಯ್ಯುವಂತಹ ಬರ್ಬರ ಸನ್ನಿವೇಶದಿಂದಾಗಿ ವ್ಯಸನಿಗಳ ಪಾಡು ಮತ್ತಷ್ಟು ದುರ್ಬರಗೊಂಡಿದೆ.

ಆದ್ದರಿಂದ ಅಮಲಿನ ಗೀಳು ಹತ್ತದಂತೆ ತಡೆಯುವುದು ಮತ್ತು ಅದಕ್ಕೆ ಮನಃಶಾಸ್ತ್ರಜ್ಞರಿಂದ ಎಡೆಬಿಡದೆ ಚಿಕಿತ್ಸೆಯನ್ನು ನೀಡುವುದು ಕುಟುಂಬದ ಜವಾಬ್ದಾರಿಯಾಗಿದೆ. ಅಮಲು ಪದಾರ್ಥಗಳ ವ್ಯಾಪಾರವನ್ನು ಮಟ್ಟ ಹಾಕುವುದು ಪೋಲೀಸರು ಹಾಗೂ ಇತರ ನಿಯಂತ್ರಕರ ಕೆಲಸವಾಗಿದ್ದು, ಅದಕ್ಕೆ ರಾಜಕೀಯ ಪಕ್ಷಗಳು ಹಾಗೂ ಆಡಳಿತದ ಬೆಂಬಲ ಹಾಗೂ ಕಣ್ಗಾವಲು ಬೇಕಾಗಿದೆ. ಅಮಲಿನಿಂದ ಮುಕ್ತರಾಗಲು ವ್ಯಸನಿಗಳಿಗೆ ಬೆಂಬಲವೂ, ಚಿಕಿತ್ಸೆಯೂ ಬೇಕಲ್ಲದೆ ಬೈಗುಳಗಳು, ಹೀಗಳಿಕೆಗಳು ಯಾ ದಂಡನೆಗಳಲ್ಲ; ಸಂಸ್ಕತಿ ರಕ್ಷಕರೆಂಬ ಸೋಗಲಾಡಿ ದಾಳಿಕೋರರಿಗೆ ಇಲ್ಲೇನೂ ಕೆಲಸವಿಲ್ಲ.

Comments are closed.