ಕರ್ನಾಟಕ

ಅಯೋಧ್ಯೆಯಲ್ಲಿ ರಾಷ್ಟ್ರ ಮಟ್ಟದ ಕುಸ್ತಿ ಅಖಾಡ; ಗದಗ ದಂಗಲ್ ಹುಡುಗಿಯರ ತಾಲೀಮು

Pinterest LinkedIn Tumblr


ಗದಗ: ಅಯೋಧ್ಯೆಯಲ್ಲಿ ಸೀನಿಯರ್ ನ್ಯಾಷನಲ್ ಚಾಂಪಿಯನ್ ಶಿಫ್ ಕುಸ್ತಿಗಾಗಿ ಗದಗದ ದಂಗಲ್ ಹುಡಗಿಯರು ಅಖಾಡದಲ್ಲಿ ಸಖತ್ ತಾಲೀಮು ನಡೆಸುತ್ತಿದ್ದಾರೆ. ಹೌದು ಗದಗ ಜಿಲ್ಲೆ ಎಂದ್ರೆ ತಟ್ಟನೆ ನೆನಪಾಗುವದು ಇಲ್ಲಿನ ಮಹಿಳಾ ಕುಸ್ತಿಪಟುಗಳು. ಇವರೂ ಈಗಾಲೇ ಕುಸ್ತಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಹಲವು ಪದಕಗಳನ್ನು ಗೆದ್ದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಗೆ ಮಾಡಿದ್ದಾರೆ. ಸಾಕಷ್ಟು ಸ್ಟ್ರಾಂಗ್ ಕಾಂಪಿಟೇಶನ್​ನಲ್ಲಿ ಎದುರಾಳಿಗಳನ್ನು ಎದುರಿಸಿದ ಕನ್ನಡದ ಯುವತಿಯರು ಸಾಕಷ್ಟು ಪದಕಗಳನ್ನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ಆದರೆ, ಕೊರೋನಾ ಹೆಮ್ಮಾರಿ ಒಕ್ಕರಿಸಿದ ಬಳಿಕ ಕುಸ್ತಿ ಸದ್ದೇ ಬಂದಾಗಿತ್ತು. ಆದ್ರೆ ಈಗ ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ಮತ್ತೆ ದಂಗಲ್ ಹವಾ ಮಾಡಲು ಸಜ್ಜಾಗಿದ್ದಾರೆ. ಗದಗ ನಗರದ ಜಿಲ್ಲಾ‌ ಕ್ರೀಡಾಂಗಣದಲ್ಲಿ ತರಬೇತುದಾರ ಶರಣಪ್ಪ ಅವರು ಹುಡುಗಿಯರಿಗೆ ಭರ್ಜರಿ ತಾಲೀಮು ನಡೆಸಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸೀನಿಯರ್​ ನ್ಯಾಷನಲ್ ಚಾಂಪಿಯನ್ ಶಿಪ್ ನಡೆಯಲಿದೆ. ಇದು ರಾಷ್ಟ್ರೀಯ ಮಟ್ಟದ ದಂಗಲ್, ಅಂದ್ರೆ ಸುಮ್ನೆ ಮಾತಲ್ಲ.ರಾಜ್ಯ ಮಟ್ಟದಲ್ಲಿ ನಡೆಯೋ ಆಯ್ಕೆ ಪ್ರಕ್ರಿಯೆಯಲ್ಲಿ ಘಟಾನುಘಟಿಗಳು ಸೆಣಸಾಡಬೇಕು. ಅದಕ್ಕೆ ಪ್ರತಿ ನಿತ್ಯ ಬೆಳಗ್ಗೆ ಎರಡು ಗಂಟೆ ಸಂಜೆ ಎರಡು ಗಂಟೆ ಅಖಾಡದಲ್ಲಿ ತರಬೇತಿ ನೀಡಲಾಗುತ್ತಿದೆ. ಡಿಸೆಂಬರ್ ಹಾಗೂ ಜನೆವರಿ ತಿಂಗಳಲ್ಲಿ ಅಯೋಧ್ಯೆಯಲ್ಲಿ ಸೀನಿಯರ್​ ನ್ಯಾಷನಲ್ ಚಾಂಪಿಯನ್ ಶಿಪ್ ನಡೆಯಲಿದೆ.

ಅಯೋಧ್ಯೆಯಲ್ಲಿ ನಡೆಯುವ ಚಾಂಪಿಯನ್​ ಶಿಪ್​ನಲ್ಲಿ ಗದಗ ಜಿಲ್ಲೆಯ 5 ಹುಡುಗಿಯರು ಹಾಗೂ 3 ಹುಡುಗರು ಭಾಗವಹಿಸಲಿದ್ದಾರೆ. ಅಂತರಾಷ್ಟ್ರೀಯ ಕುಸ್ತಿ ಪಟುಗಳಾದ ಪ್ರೇಮಾ ಹುಚ್ಚಣ್ಣವರ, ಬಸೀರಾ, ಶಹಿದಾ ಬೇಗಂ, ಶ್ವೇತಾ ಬೆಳಗಟ್ಟಿ, ಶಶಿಕಲಾ, ಪ್ರಶಾಂತಗೌಡ, ಸಾಗರ, ಫಾಲಾಕ್ಷ ಗೌಡ ಆಡಲಿದ್ದಾರೆ. ಅಯೋಧ್ಯೆಯಲ್ಲಿ ನಡೆಯೋ ಚಾಂಪಿಯನ್​ ಶಿಪ್​ನಲ್ಲಿ ಭಾಗಿಯಾಗಲು ಕಠಿಣ ತಾಲೀಮು ನಡೆಸಿದ್ದು, ಪದಕಗಳನ್ನು ಬೇಟೆಯಾಡಿ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತರ್ತೀವಿ ಅಂತಾರೆ ಪ್ರೇಮಾ ಹುಚ್ಚಣ್ಣವರ.

ಸದ್ಯ ಕೊರೋನಾ ಹಾವಳಿ ಕಡಿಮೆಯಾಗಿದ್ದು, ಕ್ರೀಡಾಪಟುಗಳು ಮತ್ತೆ ಉತ್ಸಾಹದಿಂದ ತರಬೇತಿ ಪಡೆಯುತ್ತಿದ್ದಾರೆ. ಮಹಿಳಾ ಕುಸ್ತಿ ಅಂದ್ರೆ ಗದಗ ಎನ್ನುವಂತೆ ಮಾಡಿದ್ದಾರೆ ಈ ಕುಸ್ತಿ ಹುಡುಗಿಯರು. ಹೋದಲೆಲ್ಲಾ ಚಿನ್ನದ ಶಿಕಾರಿ ಮಾಡುವ ನಮ್ಮ ಕನ್ನಡದ ಕುವರಿಯರಿಗೆ ಶುಭ ಹಾರೈಸೋಣ.

Comments are closed.