ಕರ್ನಾಟಕ

ಶಾಲೆಗಳನ್ನು ಆರಂಭಿಸುವ ಕುರಿತು ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ

Pinterest LinkedIn Tumblr


ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗಿವೆ, ಇದೀಗ ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವರದಿಯನ್ನು‌ ತಯಾರಿಸಿ ಮುಖ್ಯಮಂತ್ರಿಗೆ ಸಲ್ಲಿಸಿದೆ. ಈ ಹಿನ್ನೆಲೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮತ್ತು ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿ ಸಚಿವರಿಗೆ ನೀಡಿರುವ ಆಯುಕ್ತ ಅನ್ಬುಕುಮಾರ್ ಸಿದ್ಧಪಡಿಸಿದ ವರದಿಯನ್ನು ಸಚಿವ ಸುರೇಶ್ ಕುಮಾರ್ ಸಿಎಂ ಮುಂದಿಡಲಿದ್ದಾರೆ. ವರದಿಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ನೀಡಿದ ಅಭಿಪ್ರಾಯಗಳು ಇವೆ. ಇದರಲ್ಲಿ ಡಿಸೆಂಬರ್‌ ಎರಡನೇ ವಾರದಿಂದ ಎಸ್​ಎಸ್​ಎಲ್​​ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜು ಪ್ರಾರಂಭಿಸಬಹುದು ಎಂದು ಶಿಕ್ಷಣ ಇಲಾಖೆಯ ಶಿಫಾರಸ್ಸು ಮಾಡಲಾಗಿತ್ತು.

ಇನ್ನು ನಾಳೆ ಶಾಲೆ ಆರಂಭ ಕುರಿತು ಬಗ್ಗೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಹಿನ್ನೆಲೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಮತ್ತೊಮ್ಮೆ ಸಿಎಂಗೆ ಮನವಿ ಮಾಡಲಾಗಿದೆ. ಸಭೆಯಲ್ಲಿ ನಮಗೂ ಆರೋಗ್ಯ ಸೌಲಭ್ಯ ನೀಡಬೇಕು. ಈ ವರ್ಷವನ್ನ ಶೂನ್ಯ ವರ್ಷ ಎಂದು ಪರಿಗಣಿಸಬಾರದು. ಅಕಾಡೆಮಿಕ್ ಇಯರ್ ನನ್ನು ರೀ ಡಿಸೈನ್ ಮಾಡಬೇಕು‌. ಶಾಲಾ ಸಿಬ್ಬಂದಿಗೆ ಉಚಿತ ಕೊವೀಡ್ ಪರೀಕ್ಷೆ ಹಾಗೂ ಆರೋಗ್ಯ ವಿಮೆ ಮಾಡಿಸಬೇಕು. 9 ರಿಂದ 12 ತರಗತಿ ಆರಂಭಿಸಬೇಕು. ಈ ಮನವಿಗಳನ್ನು ಗಮನಿಸಿ ಸಿಎಂ ನಿರ್ಧಾರ ತೆಗೆದುಕೊಳ್ಳಬೇಕು. ಕೇವಲ‌ ಶಾಲಾ-ಕಾಲೇಜು ಆರಂಭ ಮಾಡೋದು ಅಲ್ಲ. ಅದರೊಂದಿಗೆ ಹಲವಾರು ಸಮಸ್ಯೆಗಳಿವೆ. ಅವುಗಳನ್ನ ಪರಿಗಣನೆಗೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಶಾಲೆ ಆರಂಭದ ವಿಚಾರವಾಗಿ ನವೆಂಬರ್ 4 ರಿಂದ 8 ರವರೆಗೆ ಸರಣಿ ಸಭೆಗಳು ಶಿಕ್ಷಣ ಸಚಿವರಿಂದ ಜರುಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಖಾಸಗಿ‌ ಶಾಲೆಗಳ ಒಕ್ಕೂಟ, ಎಸ್​ಡಿಎಂಸಿ, ಆರೋಗ್ಯ ‌ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಬಿಎಂಪಿ, ಪೋಷಕರು, ಸೇರಿದಂತೆ ‌ಹಲವು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಸದ್ಯ ಈ ಮಾಹಿತಿ ‌ಇಲಾಖೆಯ ಪ್ರದಾನ ಕಾರ್ಯದರ್ಶಿ ಎಸ್​ ಆರ್​ ಉಮಾಶಂಕರ್ ಕೈಯಲ್ಲಿದ್ದು ನಾಳೆ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಸೇರಲಿದೆ. ಇನ್ನೂ ಈ ವರದಿ ಆದಾರ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್ ಎರಡನೇ ವಾರದಲ್ಲಿ 9 ರಿಂದ 12 ತರಗತಿ ಆರಂಭ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯ ಕೊರೋನಾ ಎರಡನೇ ಅಲೆ ಆತಂಕವಿದೆ. ದೇಶದಲ್ಲಿ ಹರಿಯಾಣ, ಗುಜರಾತ್, ಮಹಾರಾಷ್ಟ್ರ ಸರ್ಕಾರಗಳು ಸದ್ಯಕ್ಕೆ ಶಾಲೆ ಬೇಡ ಅಂತ ನಿರ್ಧರಿಸಿವೆ.

Comments are closed.