ಕಲಬುರ್ಗಿ (ಜೂನ್ 11); ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಗೆಳೆಯ ಮದುವೆಯಾಗುತ್ತಿದ್ದಾನೆ ಎಂಬ ಆಕ್ರೋಶದಲ್ಲಿ ಪ್ರಾಣ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಕೊಲೆ ಆರೋಪಿಯನ್ನು ಪೊಲೀಸರು ಕೇವಲ 24 ಗಂಟೆಯ ಒಳಗಾಗಿ ಬಂಧಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಬಳಿ ಘಟನೆ ನಡೆದಿದ್ದು, ಶಿವಕುಮಾರ ಸಾಳುಂಕೆ (24) ಕೊಲೆಯಾದ ದುರ್ದೈವಿ. ಶಿವಕುಮಾರ ಅಫಜಲಪುರ ತಾಲೂಕಿನ ಅತನೂರು ನಿವಾಸಿಯಾಗಿದ್ದ. ಸಂಕನೂರು ಗ್ರಾಮದ ಗುಡ್ಡದಲ್ಲಿ ಈತನ ಶವ ಪತ್ತೆಯಾಗಿತ್ತು. ಬಂಧಿತ ಆರೋಪಿಯನ್ನು ಹೊಳಿ ಬೋಸಗಾ ಗ್ರಾಮದ ಮಲ್ಲು ಪೂಜಾರಿ ಎಂದು ಗುರುತಿಸಲಾಗಿದೆ.
ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರಿಗೆ ಅಚ್ಚರಿ ಅಂಶ ಕಾದಿತ್ತು. ಏಕೆಂದರೆ ಶಿವಕುಮಾರ ಮತ್ತು ಮಲ್ಲು ಪೂಜಾರಿ ಪ್ರಾಣ ಸ್ನೇಹಿತರಾಗಿದ್ದರು. ಶಿವಕುಮಾರನ ಮದುವೆ ತನ್ನ ಸೋದರ ಮಾವನ ಮಗಳೊಂದಿಗೆ ನಿಶ್ಚಯವಾಗಿತ್ತು. ಜೂನ್ 15 ರಂದು ಮದುವೆ ನಡೆಯಬೇಕಿತ್ತು. ಆದರೆ, ತಾನು ಪ್ರೀತಿಸಿದ ಹುಡುಗಿಯನ್ನು ಗೆಳೆಯ ಮದುವೆಯಾಗುತ್ತಾನೆಂದು ಕುಪಿತಗೊಂಡ ಮಲ್ಲು ಪೂಜಾರಿ ಶಿವಕುಮಾರ್ ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಅತನೂರಿನಿಂದ ಚಿತ್ತಾಪುರ ತಾಲೂಕಿನ ಸಂಕನೂರಿಗೆ ಕರೆದೊಯ್ದು, ಗುಡ್ಡದ ಪಕ್ಕದಲ್ಲಿ ಕೊಲೆಗೈದಿದ್ದಾನೆ. ಶವ ಯಾರಿಗೂ ಸಿಗಬಾರದೆಂದು ದೊಡ್ಡ ಗಾತ್ರದ ಕಲ್ಲುಗಳಿಂದ ಮುಂಚ್ಚಿ ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಪ್ರಕರಣದ ಬೆನ್ನು ಹತ್ತಿದ ವಾಡಿ ಪೊಲೀಸರು, ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Comments are closed.