ಕರ್ನಾಟಕ

ರಾಜ್ಯದಲ್ಲಿ ಇಂದು (ಶನಿವಾರ) 378 ಕೊರೋನಾ ಪ್ರಕರಣಗಳು ಪತ್ತೆ; 2 ಸಾವು

Pinterest LinkedIn Tumblr


ಬೆಂಗಳೂರು(ಜೂನ್ 06): ರಾಜ್ಯದಲ್ಲಿ ಕೊರೋನಾ ಓಟ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯಾದ್ಯಂತ 378 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಂಗಳೂರು ಮತ್ತು ಮಂಗಳೂರು ನಗರಗಳಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ 59 ಮಂದಿ ಮೃತಪಟ್ಟಂತಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 5,213 ತಲುಪಿದೆ.

ಸೋಂಕು ಹೆಚ್ಚಾಗುತ್ತಿರುವ ರೀತಿಯಲ್ಲೇ ಸೋಂಕಿನಿಂದ ಗುಣಮುಖಗೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ನಿನ್ನೆ ಸಂಜೆಯಿಂದ ಈವರೆಗೆ ಒಟ್ಟು 280 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೂ 1,968 ಮಂದಿ ಗುಣಮುಖರಾದಂತಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಸದ್ಯಕ್ಕೆ ಆ್ಯಕ್ಟಿವ್ ಕೇಸ್, ಅಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,184 ಇದೆ. ಇವರ ಪೈಕಿ 11 ಮಂದಿ ಐಸಿಯುನಲ್ಲಿದ್ದಾರೆ. ಉಳಿದವರ ಪರಿಸ್ಥಿತಿ ಅಪಾಯಕಾರಿ ಎನ್ನುವ ಸ್ಥಿತಿ ಇಲ್ಲ.

ಕಳೆದ 24 ಗಂಟೆ ಅವಧಿಯಲ್ಲಿ ಒಟ್ಟು 11,862 ಮಂದಿಯ ಪರೀಕ್ಷೆಯ ವರದಿ ಬಂದಿದೆ. ಈ ಪೈಕಿ 378 ವರದಿ ಪಾಸಿಟಿವ್ ಬಂದಿದೆ. ಉಳಿದ 11,431 ಸ್ಯಾಂಪಲ್​ಗಳು ನೆಗಟಿವ್ ಕೊಟ್ಟಿವೆ. ರಾಜ್ಯದಲ್ಲಿ ಈವರೆಗೆ ಪರೀಕ್ಷೆಗೊಳಪಟ್ಟ ಸ್ಯಾಂಪಲ್​ಗಳ ಸಂಖ್ಯೆ 3.72 ಲಕ್ಷ ಗಡಿ ದಾಟಿದೆ.

ಇನ್ನು, ಇವತ್ತು ಬೆಳಕಿಗೆ ಬಂದ 378 ಪ್ರಕರಣಗಳಲ್ಲಿ ಉಡುಪಿ, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳದ್ದೇ ಸಿಂಹಪಾಲು. ಉಡುಪಿಯಲ್ಲಿ ಇವತ್ತು ಒಂದೇ ದಿನ 121 ಪಾಸಿಟಿವ್ ಬಂದಿದೆ. ಬೆಂಗಳೂರು ನಗರವನ್ನೂ ಮೀರಿಸಿ ಉಡುಪಿ ಹಾಟ್​ಸ್ಪಾಟ್ ಎನಿಸಿದೆ. ಪ್ರಕರಣ ಸಂಖ್ಯೆ ನಾಳೆಯೊಳಗೆ ಸಾವಿರ ಮುಟ್ಟುವಂತಿದೆ.

ಕೊರೋನಾ ಪ್ರಕರಣಗಳಲ್ಲಿ ತಿಂಗಳುಗಟ್ಟಲೆ ನಂಬರ್ ಒನ್ ಸ್ಥಾನದಲ್ಲಿದ್ದ ಬೆಂಗಳೂರನ್ನು ಈಗ ಮೂರು ಜಿಲ್ಲೆಗಳು ಹಿಂದಿಕ್ಕಿವೆ. ಸಕ್ರಿಯ ಪ್ರಕರಣಗಳಲ್ಲಿ ಬೆಂಗಳೂರು 6ನೇ ಸ್ಥಾನಕ್ಕೆ ಇಳಿದಿದೆ.ಜೂನ್ 5ರ ಸಂಜೆಯಿಂದ ಜೂನ್ 6ರ ಸಂಜೆಯವರೆಗೆ ಬೆಳಕಿಗೆ ಬಂದ ಪ್ರಕರಣಗಳು:
ಉಡುಪಿ 121
ಯಾದಗಿರಿ 103
ಕಲಬುರ್ಗಿ 69
ದಕ್ಷಿಣ ಕನ್ನಡ 24
ಬೆಂಗಳೂರು ನಗರ 18
ದಾವಣಗೆರೆ 6
ವಿಜಯಪುರ 6
ಬೆಳಗಾವಿ 5
ಗದಗ್ 4
ಹಾವೇರಿ 3
ಧಾರವಾಡ 3
ಹಾಸನ 3
ಮಂಡ್ಯ 3
ರಾಯಚೂರು 2
ಚಿಕ್ಕಬಳ್ಳಾಪುರ 2
ಉತ್ತರ ಕನ್ನಡ 2
ಕೊಪ್ಪಳ 1
ಕೋಲಾರ 1
ಬೀದರ್ 1

Comments are closed.