ಕರ್ನಾಟಕ

ಮದುವೆಗೆ ಒಪ್ಪದ ಪ್ರಿಯತಮೆಗೆ ಇರಿದು ಯುವಕ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಚಾಕುವಿನಿಂದ ಇರಿತಕ್ಕೊಳಗಾದ ಯುವತಿ ಸಾವು ಬದುಕಿನ ನಡುವೆ ಸೆಣಸುತ್ತಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಪ್ರಿಯಕರ ಗಿರೀಶ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೇ ಯುವತಿಯ ಎದೆ, ತೊಡೆ, ಹೊಟ್ಟೆಗೆ ಚಾಕುವಿನಿಂದ ಇರಿದು ಬಳಿಕ ರಾಮನಗರಕ್ಕೆ ಪರಾರಿ ಆಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದ್ದೂರಿನ ಯುವತಿ: ಚಾಕುವಿನಿಂದ ಇರಿತಕ್ಕೆ ಒಳಗಾಗಿರುವ ಯುವತಿ ಮದ್ದೂರು ಮೂಲದವರಾಗಿದ್ದಾರೆ. ಬುಧವಾರ ಬೆಳಗ್ಗೆ 11.30 ಸುಮಾರಿಗೆ ನಾಗರಬಾವಿ ಬಳಿಯ ಅನ್ನಪೂರ್ಣೇಶ್ವರಿ ನಗರದ ವಿಶಾಲ್‌ ಮಾರ್ಟ್‌ ಸಮೀಪ ಯುವತಿಯನ್ನು ಗಿರೀಶ್‌ ಅಡ್ಡ ಹಾಕಿದ್ದ. ಕೆಲ ನಿಮಿಷ ಆಕೆ ಜತೆ ವಾಗ್ವಾದ ನಡೆಸಿ ಐದಾರು ಬಾರಿ ಚಾಕು ಇರಿದು ಪರಾರಿಯಾಗಿದ್ದಾನೆ.

ಗಿರೀಶ್‌ ಮತ್ತು ಯುವತಿ ಇಬ್ಬರೂ ಕಾಲೇಜು ದಿನಗಳಿಂದಲೂ ಪರಿಚಿತರಾಗಿದ್ದರು. ಓದು ಮುಗಿದ ಬಳಿಕ ಬೆಂಗಳೂರಿಗೆ ಬಂದು ಪಾಪರೆಡ್ಡಿಪಾಳ್ಯದಲ್ಲಿ ನೆಲೆಸಿದ್ದರು. ಆಕೆ ಗಿರೀಶ್‌ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಕೊಲೆ ಮಾಡುವ ಉದ್ದೇಶದಿಂದಲೇ ಪೂರ್ವಸಿದ್ಧತೆಯೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಗೆ ಸಿದ್ಧತೆ: ತನ್ನನ್ನು ಪ್ರೀತಿಸುವಂತೆ ಗಿರೀಶ್‌ ಬೆನ್ನು ಬಿದ್ದಿದ್ದನಾದರೂ ಯುವತಿ ಸ್ಪಷ್ಟವಾಗಿ ವಿರೋಧಿಸಿದ್ದಲ್ಲದೆ ತನ್ನ ಬೆನ್ನು ಬೀಳದಂತೆ ಹಿಂದೆಯೇ ಹಲವು ಬಾರಿ ಎಚ್ಚರಿಸಿದ್ದರು. ಆದರೂ ಬೆನ್ನು ಬಿದ್ದಿದ್ದಾಗ ಪೊಲೀಸ್‌ ಠಾಣೆಗೂ ದೂರು ನೀಡಿದ್ದರು. ಈ ನಡುವೆ ಬೇರೊಬ್ಬರ ಜತೆಗೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಇದಕ್ಕಾಗಿ ಬಟ್ಟೆ ಖರೀದಿಗೆಂದು ಯುವತಿ ಬಂದಿದ್ದಾರೆ ಎನ್ನುವ ಮಾಹಿತಿ ತಿಳಿದು ಆಕೆಯನ್ನು ಹಿಂಬಾಲಿಸಿ ಬಂದು ಚಾಕು ಇರಿದಿದ್ದಾನೆ ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ.

ಯುವತಿ ಖಾಸಗಿ ಕಂಪನಿ ಉದ್ಯೋಗಿ ಆಗಿದ್ದಾರೆ. ಗಿರೀಶ್‌ ಖಾಸಗಿ ಭದ್ರತಾ ಸಂಸ್ಥೆಯೊಂದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ .

Comments are closed.