ಕರ್ನಾಟಕ

ಮಗುವನ್ನು ನೋಡಲು ಮಾವನ ಮನೆಗೆ ಹೋಗಿದ್ದ ಪತಿಯನ್ನು ಕೊಂದ ಪತ್ನಿ

Pinterest LinkedIn Tumblr


ಬೆಳಗಾವಿ: ಮಗುವನ್ನು ನೋಡಲು ಮಾವನ ಮನೆಗೆ ಹೋಗಿದ್ದ ಪತಿಯನ್ನು ಪತ್ನಿ, ಬಾಮೈದ ಸೇರಿ ಅಟ್ಟಾಡಿಸಿ ಹೊಡೆದು ಕೊಲೆ ಮಾಡಿದ ಘಟನೆ ವಡಗಾಂವಿಯ ಲಕ್ಷ್ಮೀ ನಗರದ ಭುವನೇಶ್ವರಿ ಗಲ್ಲಿಯಲ್ಲಿ ನಡೆದಿದೆ.

ಕಿರಣ ಶಿವಪ್ಪ ಲೋಕರೆ(26) ಎಂಬಾತನನ್ನು ಪತ್ನಿ ಸವಿತಾ ಹಾಗೂ ಬಾಮೈದ ಜ್ಯೋತಿನಾಥ ಸೊಂಟಕ್ಕಿ ಸೇರಿ ಮನೆಯ ಮುಂಭಾಗದಲ್ಲಿ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಕಿರಣ ಹಾಗೂ ಸವಿತಾಳ ಮನೆ ಲಕ್ಷ್ಮೀ ನಗರದಲ್ಲಿ ಎದುರು ಬದರು ಇವೆ.ನಾಲ್ಕು ವರ್ಷಗಳ ಹಿಂದೆ ಕಿರಣ ಹಾಗೂ ಸವಿತಾ ಮಧ್ಯೆ ಪ್ರೇಮಾಂಕುರವಾಗಿದೆ.‌ ಇದೇ ಪ್ರೀತಿ ವಿವಾಹಕ್ಕೆ ತಿರುಗಿದೆ. ದಂಪತಿಗೆ ಎರಡು‌ ವರ್ಷದ ಗಂಡು‌ ಮಗುವಾಗಿತ್ತು. ಪತ್ನಿ ಸವಿತಾ ಬೇರೆ ಕಡೆಗೆ ಕೆಲಸಕ್ಕೆ ಹೋಗುತ್ತಿದ್ದಳು.‌ ಕೆಲಸಕ್ಕೆ ಹೋಗ ಬೇಡ ಎಂದು ಪತಿ ಕಿರಣ ಬಿಡಿಸಿದ್ದನು.‌ ಇದರಿಂದ ಜಗಳವಾಡಿ ಸವಿತಾ ತವರು ಮನೆಯಲ್ಲಿ ಇದ್ದಳು. ಒಂದು ವರ್ಷದಿಂದ ಕೌಟುಂಬಿಕ ಕಲಹದಿಂದಾಗಿ ದಂಪತಿ ದೂರವಾಗಿದ್ದರು.

ಪತ್ನಿ ಸವಿತಾ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ಬೆಳಗಾವಿಗೆ ವಾಪಸ್ಸು ಬಂದಾಗ ಮಗುವನ್ನು ನೋಡಲು ಕಿರಣ ಹೆಂಡತಿ ಮನೆಗೆ ಹೋಗಿದ್ದನು. ಆಗ ಪತಿ ಕಿರಣ ತನ್ನ ಮಗುವನ್ನು ನೋಡಿದ್ದಾನೆ.‌ ಆಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪತ್ನಿ ಸವಿತಾ ಹಾಗೂ ಬಾಮೈದ ಜ್ಯೋತಿನಾಥ ಜಗಳವಾಡಿದ್ದಾರೆ. ತನ್ನ ಮನೆ ಎದುರು ನಿಂತಿದ್ದ ಕಿರಣನನ್ನು ರಾಡ್ ನಿಂದ ಹೊಡೆದು ಕೊಲೆಗೈದಿದ್ದಾರೆ ಎಂದು ಕಿರಣನ ತಾಯಿ ಗೌರವದವ ಶಿವಪ್ಪ ಲೋಕರೆ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳಕ್ಕೆ ಇನ್ಸ್ಪೆಕ್ಟರ್ ಜಾವೇದ ಮುಶಾಪುರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.