ಮಂಡ್ಯ: ನಾನು ಸಂಸದನಾಗಿ ಮೆರೆಯಲು ಬಂದಿಲ್ಲ. ಸ್ಥಾನಮಾನದ ಅವಶ್ಯಕತೆ ನನಗಿಲ್ಲ. ನಿಮ್ಮ ಹೃದಯದಲ್ಲಿ ಸ್ಥಾನ ಬೇಕು. ಅದಕ್ಕಾಗಿ ಎರಡು ಪಕ್ಷಗಳ ತೀರ್ಮಾನದಂತೆ ನಾನು ಚುನಾವಣೆ ಎದುರಿಸಲು ಸಜ್ಜಾಗಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಎರಡೂ ಪಕ್ಷ ತೀರ್ಮಾನಿಸಿ ನನ್ನನ್ನು ಅಭ್ಯರ್ಥಿಯಾಗಿ ಮಾಡಿದೆ. ಜಿಲ್ಲೆಯ 8 ಜನ ಶಾಸಕರು, ಮೂವರು ಎಂಎಲ್ಸಿಗಳು ಅಭ್ಯರ್ಥಿಯಾಗಿ ನಿಲ್ಲುವಂತೆ ಒತ್ತಾಯ ಮಾಡಿದ್ದರು. ಶಾಸಕರ ಮನಸ್ಸಿಗೆ ಬೇಸರ ಆಗದ ರೀತಿಯಲ್ಲಿ ನಾನು ನಡೆದುಕೊಳುತ್ತಿದ್ದೇನೆ ಎಂದರು.
ನಾನು ಜೆಡಿಎಸ್ ನಿಷ್ಠಾವಂತ ರ್ಯಕರ್ತನಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ. ಎರಡು ಪಕ್ಷದ ನಡುವೆ ಒಂದಷ್ಟು ಗೊಂದಲವಿದೆ ಎಂದು ಜನ ಹೇಳುತ್ತಾರೆ. ಆದರೆ ಎಂದೂ ಗೊಂದಲ ಆಗದಂತೆ ನೋಡಿಕೊಳ್ಳುತ್ತೇವೆ. ಜೆಡಿಎಸ್- ಕಾಂಗ್ರೆಸ್ನವರು ಅಣ್ಣ ತಮ್ಮರಂತೆ ಇರುತ್ತೇವೆ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಋಣ ತೀರಿಸಲು ಏಳು ಜನ್ಮ ಇದ್ದರೂ ಸಾಲದು. ಈ ಮಾತನ್ನು ತಂದೆಯವರು ಪದೇ ಪದೇ ಹೇಳುತ್ತಿರುತ್ತಾರೆ. ಕುಮಾರಸ್ವಾಮಿಯ ಪ್ರತಿನಿಧಿಯಾಗಿ ಕೊನೆ ಉಸಿರಿರುವವರೆಗೆ ಪ್ರಯತ್ನಿಸುವೆ. 60 ವರ್ಷಗಳಿಂದ ದೇವೇಗೌಡ, ಕುಮಾರಸ್ವಾಮಿ ಅವರನ್ನು ಬೆಳೆಸಿದ್ದೀರಿ. ಇಂಥ ಕುಟುಂಬದಲ್ಲಿ ಹುಟ್ಟಲು ಪುಣ್ಯ ಮಾಡಿದ್ದೆ ಎಂದರು.
96ರಲ್ಲಿ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಅಂದು ದೇವೇಗೌಡರ ಮಗ ಕುಮಾರಸ್ವಾಮಿ ಅಂತ ಮಾತ್ರ ಗೊತ್ತಿತ್ತು. ಈಗ ನಾನು ಕುಮಾರಸ್ವಾಮಿ ಮಗ ಅಂತ ಮಾತ್ರ ತಿಳಿದಿದೆ. ನಿಮ್ಮ ಸೇವೆ ಮಾಡಲು ಬಂದಿದ್ದೇನೆ ಹೊರತು ಅಧಿಕಾರದ ಹಂಬಲದಿಂದ ಅಲ್ಲ ಎಂದು ಹೇಳಿದರು.
Comments are closed.