ಕರ್ನಾಟಕ

ಸಮಸ್ಯೆ ಹೇಳುತ್ತಿದ್ದ ಮಹಿಳೆಯ ಮೈಕ್​ ಕಿತ್ತುಕೊಂಡು ರೋಷಾವೇಶ ಮೆರೆದ ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೇಲೆ ದರ್ಪ ತೋರಿದ್ಧಾರೆ . ಕ್ಷೇತ್ರದ ಶಾಸಕರು ನಮ್ಮ ಕೈಗೆ ಸಿಗುವುದಿಲ್ಲ ಎಂದು ದೂರು ಹೇಳಿದ ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ಧಾರೆ. ಸಮಸ್ಯೆ ಹೇಳುತ್ತಿದ್ದ ಮಹಿಳೆಯ ಮೈಕ್​ ಕಿತ್ತುಕೊಂಡು ರೋಷಾವೇಶ ಮೆರೆದಿದ್ದಾರೆ.

‘ಏನಮ್ಮಾ.. ನನ್ನ ಮುಂದೆಯೇ ಟೇಬಲ್ ಕುಟ್ಟಿ ಮಾತನಾಡುತ್ತೀಯಾ..? ಕುತ್ಕೊಳಮ್ಮಾ ಸುಮ್ನೆ.. ಏನಮ್ಮ ನಾವು ದೇಶಕ್ಕೆ ಅನ್ಯಾಯ ಮಾಡಿರೋ ತರ ಮಾತಾಡ್ತಿದಿಯಾ’ ಎಂದು ಗದರಿಸಿ ಏಕವಚನದಲ್ಲಿಯೇ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಮಗನನ್ನು ಸಮರ್ಥಿಸಿಕೊಳ್ಳಲು ಮಹಿಳೆಯಿಂದ ಮೈಕ್​ ಕಿತ್ತುಕೊಂಡು ಕೋಪ ಪ್ರದರ್ಶನ ಮಾಡಿದ್ದಾರೆ.

ಮೈಸೂರಿನ ಟೀ. ನರಸೀಪರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್​ ಪವರ್​ ಎಕ್ಸ್​ಚೇಂಜ್​ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಮಲಾರ್​ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಶಾಸಕ ಡಾ. ಯತೀಂದ್ರ ನಮ್ಮ ಕೈಗೆ ಸಿಗುತ್ತಿಲ್ಲ, ಹಲವಾರು ಸಮಸ್ಯೆಗಳಿವೆ. ಆದರೆ ಹೇಳಿಕೊಳ್ಳಲು ಶಾಸಕರೇ ಕಾಣಸಿಗುತ್ತಿಲ್ಲ ಎಂದು ದೂರು ಹೇಳಿದರು. ಈ ವೇಳೆ ಕೋಪಗೊಂಡ ಸಿದ್ದರಾಮಯ್ಯ, ತಮ್ಮ ಮಗನನ್ನು ಸಮರ್ಥಿಸಿಕೊಳ್ಳಲು ಮಹಿಳೆ ಕೈಯಿಂದ ಮೈಕ್​ ಕಿತ್ತುಕೊಂಡು ದರ್ಪ ತೋರಿದ್ದಾರೆ.

ಇನ್ನೂ ಮಹಿಳೆ ಜೊತೆ ಸಿದ್ದರಾಮಯ್ಯ ವರ್ತಿಸಿದ ರೀತಿಗೆ ಮಾಜಿ ಸಿಎಂ ಬಿ,ಎಸ್​.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಎಲ್ಲವನ್ನೂ ಟಿವಿಯಲ್ಲಿ ನೋಡಿದೆ. ಸಿದ್ದರಾಮಯ್ಯ ಏಕವಚನದಲ್ಲಿ ತಾಲೂಕು ಪಂಚಾಯತ್​ ಮಾಜಿ ಸದಸ್ಯೆಗೆ ಗದರಿದ್ದಾರೆ. ಸಿದ್ದರಾಮಯ್ಯ ನಡವಳಿಕೆ ಯಾರಿಗೂ ಶೋಭೆ ತರುವಂತದ್ದಲ್ಲ. ಸಮಾಧಾನದಿಂದ ಉತ್ತರ ನೀಡಬಹುದಿತ್ತು. ಅವರು ಜೆಡಿಎಸ್​ ಮೇಲಿನ ಕೋಪಕ್ಕೊ ಏನೊ ಆ ರೀತಿ ನಡೆದುಕೊಂಡಿದ್ದಾರೆ. ಪ್ರಶ್ನೆ ಕೇಳಿದ ಮಹಿಳೆ ಸಹ ಕಾಂಗ್ರೆಸ್​ ಪಕ್ಷದವರು. ಹಾಗಾದರೆ ಪ್ರಶ್ನೆ ಮಾಡೋದೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ.

Comments are closed.