ಮೈಸೂರು: ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೇಲೆ ದರ್ಪ ತೋರಿದ್ಧಾರೆ . ಕ್ಷೇತ್ರದ ಶಾಸಕರು ನಮ್ಮ ಕೈಗೆ ಸಿಗುವುದಿಲ್ಲ ಎಂದು ದೂರು ಹೇಳಿದ ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ಧಾರೆ. ಸಮಸ್ಯೆ ಹೇಳುತ್ತಿದ್ದ ಮಹಿಳೆಯ ಮೈಕ್ ಕಿತ್ತುಕೊಂಡು ರೋಷಾವೇಶ ಮೆರೆದಿದ್ದಾರೆ.
‘ಏನಮ್ಮಾ.. ನನ್ನ ಮುಂದೆಯೇ ಟೇಬಲ್ ಕುಟ್ಟಿ ಮಾತನಾಡುತ್ತೀಯಾ..? ಕುತ್ಕೊಳಮ್ಮಾ ಸುಮ್ನೆ.. ಏನಮ್ಮ ನಾವು ದೇಶಕ್ಕೆ ಅನ್ಯಾಯ ಮಾಡಿರೋ ತರ ಮಾತಾಡ್ತಿದಿಯಾ’ ಎಂದು ಗದರಿಸಿ ಏಕವಚನದಲ್ಲಿಯೇ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಮಗನನ್ನು ಸಮರ್ಥಿಸಿಕೊಳ್ಳಲು ಮಹಿಳೆಯಿಂದ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ ಮಾಡಿದ್ದಾರೆ.
ಮೈಸೂರಿನ ಟೀ. ನರಸೀಪರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸ್ಚೇಂಜ್ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಮಲಾರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಶಾಸಕ ಡಾ. ಯತೀಂದ್ರ ನಮ್ಮ ಕೈಗೆ ಸಿಗುತ್ತಿಲ್ಲ, ಹಲವಾರು ಸಮಸ್ಯೆಗಳಿವೆ. ಆದರೆ ಹೇಳಿಕೊಳ್ಳಲು ಶಾಸಕರೇ ಕಾಣಸಿಗುತ್ತಿಲ್ಲ ಎಂದು ದೂರು ಹೇಳಿದರು. ಈ ವೇಳೆ ಕೋಪಗೊಂಡ ಸಿದ್ದರಾಮಯ್ಯ, ತಮ್ಮ ಮಗನನ್ನು ಸಮರ್ಥಿಸಿಕೊಳ್ಳಲು ಮಹಿಳೆ ಕೈಯಿಂದ ಮೈಕ್ ಕಿತ್ತುಕೊಂಡು ದರ್ಪ ತೋರಿದ್ದಾರೆ.
ಇನ್ನೂ ಮಹಿಳೆ ಜೊತೆ ಸಿದ್ದರಾಮಯ್ಯ ವರ್ತಿಸಿದ ರೀತಿಗೆ ಮಾಜಿ ಸಿಎಂ ಬಿ,ಎಸ್.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಎಲ್ಲವನ್ನೂ ಟಿವಿಯಲ್ಲಿ ನೋಡಿದೆ. ಸಿದ್ದರಾಮಯ್ಯ ಏಕವಚನದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆಗೆ ಗದರಿದ್ದಾರೆ. ಸಿದ್ದರಾಮಯ್ಯ ನಡವಳಿಕೆ ಯಾರಿಗೂ ಶೋಭೆ ತರುವಂತದ್ದಲ್ಲ. ಸಮಾಧಾನದಿಂದ ಉತ್ತರ ನೀಡಬಹುದಿತ್ತು. ಅವರು ಜೆಡಿಎಸ್ ಮೇಲಿನ ಕೋಪಕ್ಕೊ ಏನೊ ಆ ರೀತಿ ನಡೆದುಕೊಂಡಿದ್ದಾರೆ. ಪ್ರಶ್ನೆ ಕೇಳಿದ ಮಹಿಳೆ ಸಹ ಕಾಂಗ್ರೆಸ್ ಪಕ್ಷದವರು. ಹಾಗಾದರೆ ಪ್ರಶ್ನೆ ಮಾಡೋದೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ.
Comments are closed.