ಕರ್ನಾಟಕ

ಕುಮಾರಸ್ವಾಮಿಯಿಂದ ಕೆಆರ್​ಎಸ್​ಗೆ ಬಾಗಿನ ಅರ್ಪಣೆ

Pinterest LinkedIn Tumblr


ಮಂಡ್ಯ: ಸಂಪೂರ್ಣ ಭರ್ತಿಯಾಗಿರುವ ಜಿಲ್ಲೆಯ ಜೀವನಾಡಿ ಕೃಷ್ಣ ರಾಜಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಬಾಗಿನ ಅರ್ಪಿಸಿದರು.

ಮೈಸೂರಿನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೆಆರ್​ಎಸ್​ಗೆ ಆಗಮಿಸಿದ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಬಾಗಿನ ಅರ್ಪಿಸಿದ ನಂತರ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಡಿ.ಕೆ. ಶಿವಕುಮಾರ್​, ಸಿ.ಎಸ್​. ಪುಟ್ಟರಾಜು, ಜಿ.ಟಿ.ದೇವೇಗೌಡ, ಡಿ.ಸಿ. ತಮ್ಮಣ್ಣ ಸಿಎಂಗೆ ಸಾಥ್​ ನೀಡಿದರು.
ಇದಕ್ಕೂ ಮುನ್ನ ಕಬಿನಿ ಜಲಾಶಯಕ್ಕೆ ಕುಮಾರಸ್ವಾಮಿ ಅವರು ಬಾಗಿನ ಅರ್ಪಿಸಿದರು.

ಪೊಲೀಸರೊಂದಿಗೆ ವಾಗ್ವಾದ

ಸಿಎಂ ಕೆಆರ್​ಎಸ್​ಗೆ ಬಾಗಿನ ಅರ್ಪಿಸಲು ಬಂದ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆಆರ್​ಎಸ್​ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪೊಲೀಸರು ಅನುಮತಿ ನಿರಾಕರಿಸಿದರು. ಪಾಸ್​ ಇದ್ದರೂ ಅಣೆಕಟ್ಟೆಯ ಮೇಲೆ ತೆರಳಲು ಅನುತಿ ನೀಡಲಿಲ್ಲ ಎಂದು ಗ್ರಾ.ಪಂ. ಸದಸ್ಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ

ಆಷಾಢ ಮಾಸ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಿಯ ದರ್ಶನ ಪಡೆದ ನಂತರ ಮಾತನಾಡಿದ ಅವರು ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ನಾಡು ಸಮೃದ್ಧಿಯಾಗಿದೆ. ಉತ್ತಮ ಮಳೆ ಹಿನ್ನೆಲೆಯಲ್ಲಿ ವಿದ್ಯುತ್​ ಸಮಸ್ಯೆ ನಿವಾರಣೆಯಾಗಿದೆ. ಕೆಆರ್​ಎಸ್​ ಜಲಾಶಯಕ್ಕೆ ನಾನು 12 ವರ್ಷಗಳ ಬಳಿಕ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಇದಕ್ಕೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ಕಾರಣ ಎಂದು ತಿಳಿಸಿದರು.

ತಲಕಾವೇರಿಗೆ ಭೇಟಿ

ಶುಕ್ರವಾರ ಬೆಳಗ್ಗೆ ಕುಮಾರಸ್ವಾಮಿ ಅವರು ಕಾವೇರಿ ಉಗಮಸ್ಥಾನ ತಲಕಾವೇರಿಗೆ ಭೇಟಿ ನೀಡಿದ್ದರು. ಮೊದಲಿಗೆ ಭಗಂಡೇಶ್ವರ ದೇಗುಲಕ್ಕೆ ತೆರಳಿದ ಸಿಎಂ ಆ ನಂತರ ತಲಕಾವೇರಿಯಲ್ಲಿ ಅಗಸ್ತ್ಯೇಶ್ವರ, ಕಾವೇರಿ ಕುಂಡಿಕೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ವೇಳೆ ಸಚಿವರಾದ ಡಿ.ಕೆ.ಶಿವಕುಮಾರ್​, ಸಾ.ರಾ. ಮಹೇಶ್​ ಹಾಜರಿದ್ದರು.

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಡಿಕೇರಿ ಜಿಲ್ಲೆಯ ಭಗಂಡೇಶ್ವರ ಮತ್ತು ತಲಕಾವೇರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Comments are closed.