ಕರ್ನಾಟಕ

ಬ್ಯಾಂಕ್‌ ಸಿಬ್ಬಂದಿಗಳಿಂದಲೇ ವಂಚನೆ; 2,450 ಕೋಟಿ ರೂಪಾಯಿ ಪಂಗನಾಮ

Pinterest LinkedIn Tumblr


ಬೆಂಗಳೂರು: ಇತ್ತೀಚಿಗೆ ಬ್ಯಾಂಕ್‌ಗಳಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮದ್ಯ ದೊರೆ ವಿಜಯ್‌ ಮಲ್ಯ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂಪಾಯಿ ವಂಚಿಸಿದ್ದರೆ, ಮತ್ತೊಬ್ಬ ಕಿಲಾಡಿ ನೀರವ್‌ ಮೋದಿ 13 ಸಾವಿರ ಕೋಟಿ ರೂಪಾಯಿ ವಂಚಿಸಿದ್ದಾರೆ.

ಆದರೆ ಇದಕ್ಕಿಂತಲೂ ಹೆಚ್ಚು ಆತಂಕದ ವಿಷಯ ಎಂದರೆ ಬ್ಯಾಂಕ್‌ ಸಿಬ್ಬಂದಿಗಳಿಂದಲೇ ಹಲವೆಡೆ ವಂಚನೆಯಾಗುತ್ತಿದೆ.

ಬ್ಯಾಂಕ್‌ ನಂಬಿಕೊಂಡು ನಾವು ಕಟ್ಟುವ ದುಡ್ಡನ್ನು ಸಿಬ್ಬಂದಿ ಲಪಟಾಯಿಸುವ ಪ್ರಕರಣಗಳು ಹೆಚ್ಚಾಗಿವೆ.

ಇತ್ತೀಚಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಂಶಗಳು ಬೆಳಕಿಗೆ ಬಂದಿವೆ.

ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾ ಈ ಸಂಪೂರ್ಣ ದಾಖಲೆಗಳನ್ನು ಪಡೆದು ಅಧ್ಯಯನ ನಡೆಸಿದೆ.

2013 ರಿಂದ 2016ರವರೆಗೆ ವರದಿಯಲ್ಲಿ 2,450 ಕೋಟಿ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಒಂದು ಲಕ್ಷ ರೂಪಾಯಿ ವಂಚನೆಯಾಗಿರುವ 1,232 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಬ್ಯಾಂಕ್‌ ಸಿಬ್ಬಂದಿಯೇ ಶಾಮೀಲಾಗಿದೆ.

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಶೇಕಡ 49ರಷ್ಟು ಪ್ರಕರಣಗಳಿವೆ. 609 ಪ್ರಕರಣಗಳಲ್ಲಿ 462 ಕೋಟಿ ರೂಪಾಯಿ ವಂಚನೆಯಾಗಿದೆ.

ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಬ್ಯಾಂಕ್‌ ಸಿಬ್ಬಂದಿಗಳಿಂದ ವಂಚನೆ ಹೆಚ್ಚಾಗಿದೆ.

ರಾಜಸ್ಥಾನ, ಚಂಡೀಗಢ, ಹೊಸದಿಲ್ಲಿ, ಪಶ್ಚಿಮ ಬಂಗಾಳದಲ್ಲಿಯೂ ಬ್ಯಾಂಕ್‌ ಸಿಬ್ಬಂದಿ ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿರುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಗಂಭೀರವಾಗಿ ಪರಿಗಣಿಸಿದೆ. ಬ್ಯಾಂಕ್‌ ಸಿಬ್ಬಂದಿಯಿಂದಲೇ ವಂಚನೆಯಾಗಿರುವ ಪ್ರಕರಣಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ.

Comments are closed.