ಕರ್ನಾಟಕ

ಹೂಡಿಕೆಯಲ್ಲಿ ಕರ್ನಾಟಕ ನಂಬರ್‌ ಒನ್‌

Pinterest LinkedIn Tumblr


ವಿಧಾನಮಂಡಲ: ಕರ್ನಾಟಕ ಬಂಡವಾಳ ಹೂಡಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, 2014-19 ಕೈಗಾರಿಕೆ ನೀತಿ ಅನುಸಾರ 5 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಿಸಿ 15 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ರಾಜ್ಯಪಾಲ ವಜೂಭಾಯ್‌ ವಾಲಾ ಹೇಳಿದರು.

ಸೋಮವಾರ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇ ಶಿ ಸಿ  ಮಾತ ನಾ ಡಿದ ರಾಜ್ಯ ಪಾ ಲರು, ನಾಲ್ಕೂವರೆ ವರ್ಷಗಳಲ್ಲಿ 3.39 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ 1,869 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 13.25 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿನ ರಸ್ತೆ ಜಾಲ ಮೇಲ್ದರ್ಜೆಗೆ ಏರಿಸಲು ನಾಲ್ಕು ವರ್ಷಗಳಲ್ಲಿ 8.190 ಕೋಟಿ ರೂ. ವೆಚ್ಚದಲ್ಲಿ 9,644 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿ ಮಾಡಲಾಗಿದೆ. 20.733 ಕಿ.ಮೀ. ಜಿಲ್ಲಾ ರಸ್ತೆ ಅಭಿವೃದ್ಧಿಪಡಿಸಲಾಗಿದೆ. 1,854 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಲಾಗಿದೆ. ರೈಲ್ವೆ ಇಲಾಖೆ ಜತೆ ವೆಚ್ಚ ಹಂಚಿಕೆ ಆಧಾರದಲ್ಲಿ 12 ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಪಾಲಿಕೆ, ನಗರಸಭೆಗಳಿಗೆ ವಿಶೇಷ ಅನುದಾನ ಯೋಜನೆ ಮೂಲಕ 6,479 ಕೋಟಿ ರೂ. ವೆಚ್ಚ ಮಾಡಲಾಗಿದೆ. ನಮ್ಮ ಗ್ರಾಮ ನಮ್ಮ ಯೋಜನೆಯಡಿ 5.971 ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ 3.17 ಲಕ್ಷ ಅಭ್ಯರ್ಥಿಗಳ ನೋಂದಣಿ ಮಾಡಿ 1.23 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಿ 74,476 ಉದ್ಯೋಗಾವಕಾಶ ಒದಗಿಸಲಾಗಿದೆ ಎಂದು ಹೇಳಿದರು.

ಎಸ್‌ಸಿ-ಎಸ್‌ಟಿ ಸಮುದಾಯದ ಕಲ್ಯಾಣಕ್ಕಾಗಿ 2017-19ನೇ ಸಾಲಿನಲ್ಲಿ 27,703 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕರ್ನಾಟಕ ಬರ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೃಷಿಭಾಗ್ಯ ಯೋಜನೆ ಪ್ರಾರಂಭಿಸಿ 1,898 ಕೋಟಿ ರೂ. ವೆಚ್ಚ ಮಾಡಲಾಗಿದೆ. 1.90 ಲಕ್ಷ ಕೃಷಿ ಹೊಂಡ ನಿರ್ಮಿಸಿದೆ. 8.891 ಕೋಟಿ ರೂ. ವೆಚ್ಚದಲ್ಲಿ 2,672 ಕೆರೆ ತುಂಬಿಸಲು ಕ್ರಮಕೈಗೊಳ್ಳಲಾಗಿದೆ. 1,654 ಕೋಟಿ ರೂ. ಕೃಷಿ ಯಾಂತ್ರೀಕರಣಕ್ಕಾಗಿ ಒದಗಿಸಿದೆ. 10.46 ಲಕ್ಷ ರೈತರು ರೈತ ಸುರಕ್ಷಣಾ ಪ್ರಧಾನ ಮಂತ್ರಿ ಫ‌ಸಲ್‌ ವಿಮೆ ಯೋಜನೆಯಡಿ ಬೆಳೆ ವಿಮೆ ಹೊಂದಿದ್ದು, 6.25 ಲಕ್ಷ ರೈತರು ವಿಮೆ ಪರಿಹಾವಾಗಿ 1,005.96 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಹೇಳಿದರು.

2017-18 ನೇ ಸಾಲಿನಲ್ಲಿ 23.45 ಲಕ್ಷ ರೈತರಿಗೆ 11,902 ಕೋಟಿ ರೂ. ಕೃಷಿ ಸಾಲ ನೀಡಲಾಗಿದೆ. ನಾಲ್ಕು ವರ್ಷಗಳಲ್ಲಿ 6.74 ಲಕ್ಷ ಹೊಸ ರೈತರು 5,352 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ. ಸಂಕಷ್ಟದಲ್ಲಿರುವ ರೈತರ ರಕ್ಷಣೆಗಾಗಿ 22.27 ರೈತರು ಸಹಕಾರ ಸಂಘಗಳಲ್ಲಿ ಪಡೆದಿದ್ದ 8.165 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಸಾಧನೆಗಳ ಬಣ್ಣನೆ
ನಿರೀಕ್ಷೆಯಂತೆ ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರದ ನಾಲ್ಕೂವರೆ ವರ್ಷದ ಸಾಧನೆಗಳನ್ನು “ಭರ್ಜರಿ’ಯಾಗಿ ಬಣ್ಣಿಸಲಾಗಿದೆ. ಅನ್ನಭಾಗ್ಯ, ಮಾತೃಪೂರ್ಣ, ಅನಿಲಭಾಗ್ಯ, ಕೃಷಿ ಭಾಗ್ಯ ಯೋಜನೆ, ರೈತರ ಸಾಲ ಮನ್ನಾ, ಪಶುಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಉಚಿತ ಬಸ್‌ ಪಾಸ್‌, ಇಂದಿರಾ ಕ್ಯಾಂಟೀನ್‌, ಯೂನಿವರ್ಸಲ್‌ ಹೆಲ್ತ್‌ ಕಾರ್ಡ್‌ ಯೋಜನೆಗಳ ಜಾರಿ ಬಗ್ಗೆ ಪ್ರಸ್ತಾಪಿಸಿ 40.57 ಲಕ್ಷ ರೈತರು, 2 ಕೋಟಿ ಬಡ ಕುಟುಂಬಗಳು, 8.31 ಗರ್ಭಿಣಿ- ಬಾಣಂತಿಯರು, 32 ಲಕ್ಷ ಮಕ್ಕಳು, 106.32 ಕೋಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿರುವುದನ್ನು ಅಂಕಿ-ಸಂಖ್ಯೆಗಳ ಮೂಲಕ ವಿವರಿಸಲಾಗಿದೆ. 13 ಸಾವಿರ ಶುದ್ಧ ಕುಡಿಯುವ ನೀರು ಘಟಕ ಪ್ರಾರಂಭಿಸಿರುವುದು, ಹೈ-ಕ ವಿಶೇಷ ಸ್ಥಾನಮಾನದಡಿ ಅಭಿವೃದ್ಧಿಗೆ 7,750 ಕೋಟಿ ರೂ. ಮೀಸಲು ಹಾಗೂ ನೇರ ನೇಮಕಾತಿ ಮೂಲಕ 18,993 ಹುದ್ದೆ ಭರ್ತಿ, ನೀರಾವರಿ ಯೋಜನೆಗಳಿಗೆ 58,393 ಕೋಟಿ ರೂ. ಹಂಚಿಕೆ, ಎತ್ತಿನಹೊಳೆ ಯೋಜನೆಗೆ 3,176 ಕೋಟಿ ರೂ. ವೆಚ್ಚ ಮಾಡಿರುವುದನ್ನು ತಿಳಿಸಲಾಗಿದೆ.

ಆರ್ಥಿಕತೆ ಸುಸ್ಥಿತಿ ಪ್ರತಿಪಾದನೆ
ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದ್ದು, ಕಳೆದ ಐದು ವರ್ಷಗಳಲ್ಲಿ ಸರ್ಕಾರ ಸತತವಾಗಿ ರಾಜಸ್ವ ಉಳಿಸಿಕೊಂಡು ಬಂದಿದೆ. ಆರ್ಥಿಕ ಕೊರತೆಯನ್ನು ರಾಜ್ಯ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ.3ಕ್ಕಿಂತ ಕಡಿಮೆ ಹಾಗೂ ಒಟ್ಟಾರೆ ಹೊಣೆಗಾರಿಕೆಯನ್ನು ರಾಜ್ಯದ ಆಂತರಿಕ ಒಟ್ಟು ಉತ್ಪನ್ನದ ಶೇ.25ರೊಳಗೆ ಇರುವಂತೆ ಖಚಿತಪಡಿಸಿಕೊಳ್ಳುವ ಮೂಲಕ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಎಲ್ಲ ಅಗತ್ಯತೆ ಪೂರೈಸಿದೆ. ರಾಜ್ಯದಲ್ಲಿ ಜಿಎಸ್‌ಟಿ ಜಾರಿಗೊಳಿಸಲಾಗಿದ್ದು, ಜಿಎಸ್‌ಟಿ ಅಡಿಯಲ್ಲಿ ರೂಪಿಸಿರುವ ಕಾನೂನು ಅವಶ್ಯಕತೆಗಳನ್ನು ಐಟಿ ವೇದಿಕೆಯಲ್ಲಿ ಪೂರೈಸುವಲ್ಲಿ ತೆರಿಗೆದಾರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಜಿಎಸ್‌ಟಿ ಸಂಗ್ರಹಣೆಯಲ್ಲಿ ಏರಿಳಿತವಾಗುತ್ತಿದೆ. ಕೇಂದ್ರ ಸರ್ಕಾರದಿಂದ ಬರಬೇಕಾದ ನಷ್ಟ ಪರಿಹಾರದ ಮೂಲಕ ಕೊರತೆ ನೀಗಿಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಲಾಗಿದೆ.

-ಉದಯವಾಣಿ

Comments are closed.