ರಾಷ್ಟ್ರೀಯ

ದೇವತೆಗೆ ಚೂಡಿದಾರ ಅಲಂಕಾರ: ಇಬ್ಬರು ಅರ್ಚಕರ ಅಮಾನತು

Pinterest LinkedIn Tumblr

ನಾಗಪಟ್ಟಣಂ: ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ಶಕ್ತಿ ದೇವತೆ ವಿಗ್ರಹಕ್ಕೆ ಚೂಡಿದಾರ ಉಡುಪಿನಿಂದ ಅಲಂಕಾರ ಮಾಡಿದ್ದಕ್ಕಾಗಿ ಇಬ್ಬರು ಅರ್ಚಕರನ್ನು ಅಮಾನತು ಮಾಡಲಾಗಿದೆ.

ಇಲ್ಲಿನ ಪ್ರಖ್ಯಾತ ಮಯೂರನಾಥಸ್ವಾಮಿ ದೇಗುಲದಲ್ಲಿ ಈ ಘಟನೆ ನಡೆದಿದೆ. ಫೆ.2ರಂದು ಇಬ್ಬರು ಅರ್ಚಕರು ದೇಗುಲದ ಆವರಣದೊಳಗಿರುವ ಶಕ್ತಿ ದೇವತೆ ಮೂರ್ತಿಗೆ ಗುಜರಾತಿ ಶೈಲಿಯಲ್ಲಿ ಚೂಡಿದಾರ ತೊಡಿಸಿ ಅಲಂಕಾರ ಮಾಡಿದ್ದರು. ಜೊತೆಗೆ, ವಿಗ್ರಹಕ್ಕೆ ಗಂಧವನ್ನು ಪೂಸಿ ಸಿಂಗರಿಸಿದ್ದರು. ಅಲಂಕೃತ ವಿಗ್ರಹದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಕೆಲ ಭಕ್ತರು, ಇದು ‘ಆಗಮ’ ಸಂಪ್ರದಾಯದ ಉಲ್ಲಂಘನೆ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಕೆಲವು ಭಕ್ತರು ಹಾಗೂ ದೇಗುಲದ ಆಡಳಿತ ಮಂಡಳಿಯ ಕೆಲ ಸದಸ್ಯರು ಇದೇನೂ ಅಪಮಾನಕಾರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರಾದರೂ, ಶಕ್ತಿ ದೇವತೆಯನ್ನು ಸೀರೆ ಹೊರತಾಗಿ ಇತರ ಉಡುಪುಗಳಿಂದ ಅಲಂಕರಿಸುವುದು ದೇಗುಲದ ನಿಯಮಗಳ ಉಲ್ಲಂಘನೆ ಎಂದು ಹೇಳಿದ್ದಾರೆ.

ವಿವಾದದ ಬಳಿಕ, ತಿರುವವಡುತುರೈ ಅಧೀನಂ ಮಠದ ಹಿರಿಯ ಸ್ವಾಮಿಗಳು ಇಬ್ಬರೂ ಅರ್ಚಕರ ಅಮಾನತಿಗೆ ಆದೇಶಿಸಿದ್ದಾರೆ.

ಇಲ್ಲಿನ ಮಯೂರನಾಥಸ್ವಾಮಿ ದೇಗುಲವು ಕಾವೇರಿ ತಟದಲ್ಲಿರುವ ಪ್ರಾಚೀನ ಶಿವ ದೇವಾಲಯಗಳಲ್ಲಿ ಒಂದಾಗಿದ್ದು, ಚೋಳರು ಇದನ್ನು ನಿರ್ಮಿಸಿದ್ದಾರೆ.

Comments are closed.