ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಸರ್ವಪಕ್ಷಗಳ ನಿಯೋಗ ಭೇಟಿ ಮಾಡಿದ್ದು ಪ್ರಕೃತಿ ವಿಕೋಪದಿಂದಾಗಿ ತೀವ್ರ ಬಾಧಿತವಾಗಿರುವ ರಾಜ್ಯಕ್ಕೆ 4702.54 ಕೋಟಿ ರುಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ.
ರಾಜ್ಯದ 139 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಬರದಿಂದ 36.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿಗೆ ಹಾನಿಯಾಗಿದ್ದು, 35 ಲಕ್ಷ ರೈತರಿಗೆ ಒಟ್ಟು 17,183 ಕೋಟಿ ರುಪಾಯಿ ನಷ್ಟು ನಷ್ಟವಾಗಿದೆ. ಇನ್ನು ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರೀ ಮಳೆ ಬಂದು ಬೆಳೆ ಹಾನಿಯಾಗಿದೆ. ನೆರೆ ಪರಿಹಾರವಾಗಿ 386.44 ಕೋಟಿ ರುಪಾಯಿ ನೆರವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೀಡಬೇಕು ಎಂದು ಕೋರಲಾಗಿದೆ. ಅಲ್ಲದೆ ನರೇಗಾ ಯೋಜನೆಯಡಿ ರಾಜ್ಯಕ್ಕೆ ಕೇಂದ್ರದಿಂದ 2,856.72 ಕೋಟಿ ರುಪಾಯಿಗಳಷ್ಟು ಬಾಕಿ ಇದೆ ಅದನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಪ್ರಧಾನಿಯನ್ನು ಕೋರಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದೇ ವೇಳೆ ಮಹದಾಯಿ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಬೇಕು, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ(ನರೇಗಾ) ಯೋಜನೆಯಡಿ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕು ಎಂದು ನಿಯೋಗ ಆಗ್ರಹಿಸಿದೆ.
Comments are closed.