ಬೆಂಗಳೂರು: ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಿಂದ ಸಹಾಯಕ ಸಬ್ ಇನ್ಸ್ಟೆಕ್ಟರ್ ಹುದ್ದೆವರೆಗಿನ 11 ಸಾವಿರ ಸಿಬ್ಬಂದಿಗೆ ಏಕ ಕಾಲದಲ್ಲಿ ಬಡ್ತಿ ಭಾಗ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಬುಧವಾರ ಗೃಹ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಳ ಹಂತದ ಪೊಲೀಸ್ಸಿಬ್ಬಂದಿಗೆ ಬಡ್ತಿ ನೀಡಲು ಕ್ರಮ ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಿದರು.
ಸಕಾರಣ ಇಲ್ಲದೇ ಬಡ್ತಿ ತಡೆ ಹಿಡಿಯಬಾರದು. ಬಡ್ತಿಗೆ ಅರ್ಹರಾದ ಸಿಬ್ಬಂದಿ ಪಟ್ಟಿಯನ್ನು ಇದೇ ತಿಂಗಳು ಸಿದ್ಧಪಡಿಸಬೇಕು. 2017ರ ಜನವರಿಯಲ್ಲಿ ರಾಜ್ಯದಾದ್ಯಂತ ಬಡ್ತಿ ಆದೇಶವನ್ನು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೇರವಾಗಿ ವಿತರಿಸಬೇಕು ಎಂದು ಆದೇಶ ನೀಡಿದರು.
2013ರಿಂದ ಈಚೆಗೆ ಕಾನ್ಸ್ಟೇಬಲ್ ಸೇರಿದಂತೆ 26,702 ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ಕೊರತೆನೀಗಿಸಲು ಮುಂದಿನ ಎರಡು ವರ್ಷದಲ್ಲಿ ನಡೆಯಬೇಕಾದ ನೇಮಕಾತಿಗಳಿಗೂ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
Comments are closed.