ಕರ್ನಾಟಕ

ಆತ್ಮಹತ್ಯೆ ಮಾಡಿಕೊಂಡ ಪತಿಯ ಅಂತ್ಯಕ್ರಿಯೆ ಮುಗಿಸಿದ ಬಳಿಕ ತಾನೂ ನೇಣಿಗೆ ಶರಣಾದ ಪತ್ನಿ

Pinterest LinkedIn Tumblr

2

ಬೆಂಗಳೂರು: ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನೊಂದ ಮಹಿಳೆ, ಅಂತ್ಯಕ್ರಿಯೆ ಮುಗಿಸಿದ ಬಳಿಕ ತಾನೂ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ದಾರುಣ ಘಟನೆ ಬನಶಂಕರಿ ಎರಡನೇ ಹಂತದ ಅಂಬೇಡ್ಕರ್‌ನಗರದಲ್ಲಿ ಗುರುವಾರ ನಡೆದಿದೆ.

‘ರೀ.. ನನಗಾಗಿ ಕಾಯುತ್ತಿರಿ. ನಿಮ್ಮ ಹಿಂದೆಯೇ ಬರುತ್ತೇನೆ. ಐ ಮಿಸ್‌ ಯು ಮಾಮಾ..’ ಎಂದು ಪತ್ರ ಬರೆದಿಟ್ಟು, ಚೈತ್ರಾ (22) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತಿ ಮಣಿಕಂಠ (28) ಬುಧವಾರ ಬೆಳಿಗ್ಗೆ ಮನೆಯಲ್ಲೇ ನೇಣು ಹಾಕಿಕೊಂಡಿದ್ದರು.

ಪ್ರೇಮ ವಿವಾಹ: ಪೇಂಟರ್ ಆಗಿದ್ದ ಮಣಿಕಂಠ, ಆರು ವರ್ಷಗಳಿಂದ ಚೈತ್ರಾ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಪೋಷಕರ ಒಪ್ಪಿಗೆ ಮೇರೆಗೇ 2014ರಲ್ಲಿ ಮದುವೆ ಆಗಿದ್ದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಣಿಕಂಠ, ಚಿಕಿತ್ಸೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇತ್ತ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದ ಕಾರಣ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ ಸಂಜೆ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ಗಂಡನ ಸಾವಿನ ನೋವಿನಲ್ಲಿದ್ದ ಚೈತ್ರಾ, ರಾತ್ರಿ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದರು.

ನಡುಮನೆಯಲ್ಲಿ ಮಲಗಿದ್ದ ಅವರ ತಾಯಿ ಮಂಜುಳಾ, ರಾತ್ರಿ 10.30ರ ಸುಮಾರಿಗೆ ಕೋಣೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬನಶಂಕರಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ದೇವರಿಗೆ ಪತ್ರ!
‘ದೇವರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕ್ಷಮಿಸು. ನಾನು ಅಲ್ಲಿ ಗಂಡನ ಜತೆ ಸಂತೋಷವಾಗಿ ಇರುತ್ತೇನೆ. ದಯವಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಮ್ಮಿಬ್ಬರಿಗೂ ಯಾವುದೇ ಶಿಕ್ಷೆ ಕೊಡಬೇಡ’ ಎಂದು ಚೈತ್ರಾ ಪತ್ರದಲ್ಲಿ ಬೇಡಿಕೊಂಡಿದ್ದಾರೆ.

Comments are closed.