ಕರ್ನಾಟಕ

ಗೌಡರ ವಿರುದ್ಧ ಹೇಳಿಕೆ; ಜಮೀರ್ ನಿವಾಸಕ್ಕೆ ಕಾರ್ಯಕರ್ತರಿಂದ ಮುತ್ತಿಗೆ

Pinterest LinkedIn Tumblr

Zamir-ahamadಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಪಮಾನಕಾರಿ ಹೇಳಿಕೆ ನೀಡಿದ್ದ ಜೆಡಿಎಸ್ ಶಾಸಕ ಜಮೀರ್ ನಿವಾಸಕ್ಕೆ ಸೋಮವಾರ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಯುಬಿ ಸಿಟಿಯಲ್ಲಿರುವ ಜಮೀರ್ ಅಹ್ಮದ್ ಅವರ ಫ್ಲ್ಯಾಟ್ ಗೆ ಜೆಡಿಎಸ್ ಕಾರ್ಯಕರ್ತರು ತೆರಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಮೀರ್ ಅವರ ಗನ್ ಮ್ಯಾನ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಜಮೀರ್ ಅಹ್ಮದ್ ಅವರು ಮನೆಯಲ್ಲಿದ್ದರು, ಜೆಡಿಎಸ್ ಕಾರ್ಯಕರ್ತರಿಗೆ ಒಳಹೋಗಲು ಅವಕಾಶ ಕೊಡದೇ ಇರುವುದು ಗಲಾಟೆಗೆ ಕಾರಣವಾಯಿತು.

ಜೆಡಿಎಸ್‌ ರಾಜ್ಯಸಭಾ ಟಿಕೇಟನನ್ನು ವ್ಯವಹಾರಕ್ಕಾಗಿ ಫಾರೂಕ್‌ ಅವರಿಗೆ ನೀಡಲಾಗಿದೆಯೆ ಹೊರತು ಮುಸ್ಲಿಂ ಎಂಬ ಕಾರಣಕ್ಕಾಗಿ ಅಲ್ಲ, ದೇವೇಗೌಡ ಕುಮಾರಸ್ವಾಮಿ ಅವರ ಮುಸ್ಲಿಂ ಪರ ಕಾಳಜಿ ಕೇವಲ ನಾಟಕ ಎಂದು ಜೆಡಿಎಸ್‌ ಬಂಡಾಯ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು.

ದೇವೇಗೌಡರು ಮಗನ ವ್ಯವಹಾರಕ್ಕಾಗಿ ರಾಜ್ಯಸಭಾ ಟಿಕೇಟನ್ನು ಕಾಂಗ್ರೆಸ್‌ನಿಂದ ಬಂದ ಫಾರೂಕ್‌ಗೆ ನೀಡಿದ್ದಾರೆ. ನಮ್ಮಲ್ಲೂ ಮುಸ್ಲಿಂ ಅಭ್ಯರ್ಥಿಗಳಿರಲಿಲ್ಲವೇ ? ಡ್ಯಾನಿಷ್‌ ಅಲಿ ಅವರಿದ್ದರು, ಜಫ್ರುಲ್ಲಾ ಖಾನ್‌ ಅವರಿದ್ದರು ಇವರೆನ್ನೆಲ್ಲಾ ಬಿಟ್ಟು ಫಾರೂಕ್‌ಗೆ ನೀಡಿರುವುದು ಪ್ರಶ್ನೆ ಹುಟ್ಟು ಹಾಕಿದೆ. ಮುಸ್ಲಿಮರ ಬಗ್ಗೆ ಕಾಳಜಿ ಇದ್ದರೆ ಹಾಸನವನ್ನೋ , ರಾಮನಗರ ಲೋಕಸಭಾಕ್ಷೇತ್ರವನ್ನು ಮುಸ್ಲಿಂ ಅಭ್ಯರ್ಥಿಗಳಿಗೆ ಬಿಟ್ಟುಕೊಡಿ ಎಂದು ದೇವೇಗೌಡರಿಗೆ ಜಮೀರ್‌ ಸವಾಲು ಹಾಕಿದ್ದರು.

ಜಮೀರ್‌ಗೆ ಟಾಂಗ್‌ ಕೊಡುವುದು ನಿಮ್ಮಿಂದ ಜನ್ಮದಲ್ಲಿ ಸಾಧ್ಯವಿಲ್ಲ, ನನಗೆ ಟಾಂಗ್‌ ನೀಡುವುದಿದ್ದರೆ ದೇವರು ಮಾತ್ರ ಎಂದು ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದರು.
-ಉದಯವಾಣಿ

Comments are closed.