ಚಿಕ್ಕೋಡಿ: ಅಪ್ಪ-ಅಮ್ಮನದು ಕೂಲಿ ಕೆಲಸ, ಗುಡಿಸಲಿನಲ್ಲಿ ವಾಸ, ದೀಪದ ಬೆಳಕಿನಲ್ಲಿ ಓದು. ಇಂಥ ಪರಿಸ್ಥಿತಿಯಲ್ಲೂ ತಾಲೂಕಿನ ಚಿಂಚಣಿ ಗ್ರಾಮದ ವಿದ್ಯಾರ್ಥಿನಿ ಶ್ರುತಿ ಕುಂಬಾರ ಶೇ. 95.84 ಅಂಕ ಗಳಿಸಿ ಶ್ರೀ ಅಲ್ಲಮಪ್ರಭು ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಶ್ರುತಿಯ ಪಾಲಕರಾದ ಚಿಂಚಣಿ ಗ್ರಾಮದ ರಾಮು ಕುಂಬಾರ ಹಾಗೂ ಅನಸೂಯಾ ಕುಂಬಾರ ಕೂಲಿ ಮಾಡಿ ಜೀವ ಸಾಗಿಸುತ್ತಾರೆ. ಕುಟುಂಬದ ವಾಸ ಗುಡಿಸಲಿನಲ್ಲಿ. ಇವರ ಮನೆಗೆ ವಿದ್ಯುತ್ ಸಂಪರ್ಕವೂ ಇಲ್ಲ. ಹಾಗಾಗಿ ದೀಪದ ಬೆಳಕಿನಲ್ಲಿಯೇ ಓದಿ ಈಕೆ ಉನ್ನತ ಸಾಧನೆ ಮಾಡಿದ್ದಾಳೆ. ಶಿಕ್ಷಕಿಯಾಗಿ ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವ ಆಶಯವನ್ನೂ ಹೊಂದಿದ್ದಾಳೆ.
ಲಾಟೀನ್ ಬೆಳಕಲ್ಲೇ ಓದಿ ಡಿಸ್ಟಿಂಕ್ಷನ್
ಪದೇಪದೆ ಕಣ್ಣಾಮುಚ್ಚಾಲೆ ಆಡುವ ಕರೆಂಟ್ನಿಂದ ಬೇಸತ್ತು ಸೀಮೆಎಣ್ಣೆ ಲಾಟೀನ್ ಬೆಳಕಿನಲ್ಲಿ ಓದುವುದನ್ನು ರೂಢಿಸಿಕೊಂಡ ವಿದ್ಯಾರ್ಥಿನಿ ಅಧಿಕ ಅಂಕ ಗಳಿಸಿದವರಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿಗೆ ಮೊದಲಿಗಳಾಗಿದ್ದಾಳೆ. ನಿಟ್ಟೂರಿನ ಶ್ರೀರಾಮ ಪ್ರಜ್ಞಾ ಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಎ.ಸಿರಿ ಸಾಧನೆ ಮಾಡಿದಾಕೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈಕೆ 614 ಅಂಕ ಪಡೆದಿದ್ದಾಳೆ. ಕುಗ್ರಾಮ ನಿಟ್ಟೂರು ಪ್ರದೇಶದಲ್ಲಿ ವಿದ್ಯುತ್ ಕೈಕೊಡುವುದೇ ಹೆಚ್ಚು. ಪರೀಕ್ಷೆ ಸಮಯದಲ್ಲಿ ಕರೆಂಟ್ ಇರಲಿಲ್ಲ. ಇದ್ದರೂ ಸಿಂಗಲ್ ಫೇಸ್. ಇದರಿಂದ ಬೇಸತ್ತ ವಿದ್ಯಾರ್ಥಿನಿ ಸೀಮೆಎಣ್ಣೆ ಲಾಟೀನ್ ಮೊರೆ ಹೋಗಿ ಈ ಸಾಧನೆ ಮಾಡಿದ್ದಾಳೆ.
Comments are closed.