
ಬೆಂಗಳೂರು: ಮೀಟರ್ ಬಡ್ಡಿ ದಂಧೆ ಕುಖ್ಯಾತಿಯ ಮಹಿಳಾ ರೌಡಿ ಶೀಟರ್ ಯಶಸ್ವಿನಿ ಪೊಲೀಸ್ ಸರ್ಪಗಾವಲಿನ ನಡುವೆಯೇ ಆಸ್ಪತ್ರೆಯಿಂದ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಡ್ಡಿ ಹಣ ನೀಡದ ಮಹಿಳೆಯರಿಗೆ ಮನಸೋ ಇಚ್ಛೆ ಥಳಿಸಿದ್ದ ಯಶಸ್ವಿನಿಯನ್ನು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಎದೆನೋವಿನ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಇಂದು ಪೊಲೀಸ್ ಕಾವಲಿನ ನಡುವೆಯೇ ಯಶಸ್ವಿನಿ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಿಂದ ಯಶಸ್ವಿನಿ ಪರಾರಿಯಾಗಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆಸ್ಪತ್ರೆಯ ಕೊಠಡಿಯಲ್ಲಿ ತಾನು ಉಟ್ಟಿದ್ದ ಸೀರೆಯನ್ನು ಬಚ್ಚಿಟ್ಟು, ಯಾರಿಗೂ ಅನುಮಾನ ಬಾರದಿರಲಿ ಎಂದು ಬೇರೆ ಉಡುಗೆಯಲ್ಲಿ ಪರಾರಿಯಾಗಿದ್ದಾಳೆ. ಸಿನಿಮೀಯ ರೀತಿಯಲ್ಲಿ ರೌಡಿಶೀಟರ್ ಯಶಸ್ವಿನಿ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಯಶಸ್ವಿನಿ ದಾಖಲಾಗಿದ್ದ ಆಸ್ಪತ್ರೆ ಕೊಠಡಿಯ ಕಿಟಕಿ ಸರಳುಗಳನ್ನು ಮುರಿದು ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಪೊಲೀಸರು ನೀಡಿರುವ ಮಾಹಿತಿಯಂತೆ ನಿನ್ನೆ ರಾತ್ರಿ ಆಸ್ಪತ್ರೆಗೆ ಸಂಬಂಧಿಕರನ್ನು ಕರೆಸಿಕೊಂಡ ಯಶಸ್ವಿನಿ, ಅವರಿಂದ ಬಟ್ಟೆ ಪಡೆದು ತಾನು ಉಟ್ಟಿದ್ದ ಸೀರೆಯನ್ನು ಕೊಠಡಿಯಲ್ಲೇ ಬಚ್ಚಿಟ್ಟಿದ್ದಾಳೆ. ಬಳಿಕ ಮಧ್ಯರಾತ್ರಿ ವೇಳೆ ಕಿಟಕಿಯ ಸರಳುಗಳನ್ನು ಮುರಿದು ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಯಶಸ್ವಿನಿ ಬಂಧನಕ್ಕಾಗಿ 2 ವಿಶೇಷ ತಂಡ ರಚನೆ
ಇನ್ನು ಆಸ್ಪತ್ರೆಯಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ಆಸ್ಪತ್ರೆಯಿಂದ ಪರಾರಿಯಾಗಿರುವ ರೌಡಿ ಶೀಟರ್ ಯಶಸ್ವಿನಿ ಬಂಧನಕ್ಕಾಗಿ 2 ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.