ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ರಾಘವೇಂದ್ರ ಮತ್ತು ಅನು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ರಾಘವೇಂದ್ರ ಹಾಸನದಲ್ಲಿ, ಅನು ಬೆಂಗಳೂರಿನ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿ, ತರಾತುರಿಯಲ್ಲಿ ಅನು ಮದುವೆ ನಡೆಸಲು ಮುಂದಾಗಿದ್ದಾರೆ. ಆಗ ರಾಘವೇಂದ್ರ ಈ ವಿಷಯವನ್ನು ಅನು ಮದುವೆಯಾಗುವ ಯುವಕ ಪ್ರಶಾಂತ್ ಎಂಬುವವನಿಗೆ ತಿಳಿಸಿದ್ದನು. ರಾಘವೇಂದ್ರ ಮತ್ತು ಅನು ಪ್ರೀತಿಯ ವಿಷಯದ ತಿಳಿದಿದ್ದ ಪ್ರಶಾಂತ್ ಅದನ್ನು ಲೆಕ್ಕಿಸದೇ ಅನುಳನ್ನು ತರಾತುರಿಯಲ್ಲಿ ವಿವಾಹವಾಗಿದ್ದಾನೆ.
ಇದರಿಂದ ಮನನೊಂದು ರಾಘವೇಂದ್ರ ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟು ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾನೆ. ರಾತ್ರಿ ರಾಘವೇಂದ್ರ ಮೊಬೈಲ್ ಗೆ ಕರೆ ಮಾಡಿದ್ದ ಅನುಗೆ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಸಿದ್ದಾರೆ. ಪ್ರಿಯಕರ ಸಾವನ್ನಪ್ಪಿದ ಸುದ್ದಿ ಕೇಳಿದ ಅನು ನೇಣಿಗೆ ಶರಣಾಗಿದ್ದಾಳೆ.
ಕಳೆದ ಏಳು ವರ್ಷಗಳ ಹಿಂದೆ ಹಾಸನದಿಂದ ಬೆಂಗಳೂರಿಗೆ ಆಗಮಿಸಿದ್ದ ರಾಘವೇಂದ್ರ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅನು ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಹಾಸನ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.