ಕೊಪ್ಪಳ: ತಾಲ್ಲೂಕಿನ ಹಲಗೇರಿ ಬಳಿ ಸೋಮವಾರ ಲಾರಿ ಮತ್ತು ಟಂಟಂ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕಾಲೊನಿಯ 11 ಮಂದಿ ಸಾವನ್ನಪ್ಪಿದ್ದಾರೆ.
ಯಲಬುರ್ಗಾ ತಾಲ್ಲೂಕು ಕುಕನೂರಿನ ನೇಕಾರ ಕಾಲೊನಿ (ಕೆಮ್ಮಣ್ಣಕುಣಿ) ನಿವಾಸಿಗಳಾದ ಕುಸುಮಾ ತಟ್ಟಿ (14), ವೀರಪ್ಪ ಗೋಣೆಪ್ಪ ವೀರಾಪುರ (35), ನಿರಂಜನಿ ಶಿವಪ್ಪ ಹರಿಜನ (32), ಆಶಾ (18), ಆಶಾ ಅವರ ತಾಯಿ ಬೀಬಿ ಜಾನ್(40), ಸರೋಜಾ ನಾಗರಾಜ್ ಸಬರದ್ (45), ಗಂಗಮ್ಮ ಲಂಗ್ಟಿ (50) ಕೊಪ್ಪಳದ ನಾಗವೇಣಿ ಸುರೇಶ್ ತಟ್ಟಿ (13), ಟಂಟಂ ಚಾಲಕ ಶಿವಮೂರ್ತಿ(23), ಮಂಜುಳಾ ಹಿರೇಮನಿ (23), ಅನ್ನಪೂರ್ಣ ಕೊಂಡೇಕರ್ (14) ಮೃತಪಟ್ಟವರು.
ಶಕುಂತಲಾ, ನಿರ್ಮಲಾ, ಫಾತಿಮಾ, ಅನ್ನಪೂರ್ಣಾ, ಲಕ್ಷ್ಮಿ, ಲಾರಿ ಕ್ಲೀನರ್ ದಾವಲ್ಸಾಬ್ ಗಾಯಗೊಂಡಿದ್ದಾರೆ. ಇವರ ಪೈಕಿ ಅನ್ನಪೂರ್ಣಾ ಮತ್ತು ಲಕ್ಷ್ಮಿ ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.