ಮಂಗಳೂರು / ಉಳ್ಳಾಲ : ಮೂವರು ಯುವಕರ ಮೇಲೆ ಅಪರಿಚಿತ ದುಷ್ಕರ್ಮಿಗಳು ತಲ್ವಾರ್ನಿಂದ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಸೋಮವಾರ ತಡರಾತ್ರಿ ಉಳ್ಳಾಲ ಸಮೀಪದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಎದುರಿನ ರಕ್ಷಾ ಕ್ಲಿನಿಕ್ ಬಳಿ ನಡೆದಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ದಾಳಿಯಿಂದ ಗಂಭೀರ ಗಾಯಗೊಂಡ ಯುವಕನನ್ನು ಫಸ್ವಾನ್ (24) ಎಂದು ಗುರುತಿಸಲಾಗಿದ್ದು, ಈತನನ್ನು ನಗರದ ಯುನಿಟಿ ಆಸ್ಪತ್ರೆಗೆ ದಾಖಲುಪಡಿಸಲಾಗಿದೆ.
ಸಲೀಂ (24), ನಿಝಾಮ್ (22) ಹಾಗೂ ಫಸ್ವಾನ್ (24) ಕ್ಯಾಟರಿಂಗ್ ಕೆಲಸ ಮುಗಿಸಿಕೊಂಡು ತಡ ರಾತ್ರಿ 12.55ರ ವೇಳೆ ಮೂವರು ಒಂದೇ ಬೈಕ್ನಲ್ಲಿ ಮನೆಗೆ ಹಿಂದಿರುಗಿ ಬರುತ್ತಿದಾಗ ತೊಕ್ಕೊಟ್ಟು ಓವರ್ ಬ್ರಿಡ್ಜ್ ಎದುರಿನ ರಕ್ಷಾ ಕ್ಲಿನಿಕ್ ಬಳಿ ದುಷ್ಕರ್ಮಿಗಳು ಇವರ ಮೇಲೆ ದಾಳಿ ನಡೆಸಿದ್ದರೆನ್ನಲಾಗಿದೆ.
ದುಷ್ಕರ್ಮಿಗಳ ದಾಳಿಗೆ ಹೆದರಿದ ನಿಝಾಮ್ ಎಂಬಾತ ಸ್ಥಳದಿಂದ ಓಡಿ ಹೋಗಿದ್ದು, ಇದೀಗ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಸಲೀಂ ಎಂಬತಾನಿಗೆ ಕಾಲಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಫಸ್ವಾನ್ ಸ್ಥಿತಿ ಗಂಭೀರವಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.