ಕಲಬುರಗಿ, ಏ.23-ಬಿಸಿಲಿನ ತಾಪಕ್ಕೆ ಟ್ರಾಫಿಕ್ ಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲಬುರಗಿ ನಗರದ ಜಗತ್ ಬಡಾವಣೆ ನಿವಾಸಿ ನಾಗಪ್ಪ ದೋತ್ರೆ (51) ಮೃತಪಟ್ಟ ದುರ್ದೈವಿ. ಇವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ನಡೆಸಲಾದ ಬಂದೋಬಸ್ತ್ ವ್ಯವಸ್ಥೆಗಾಗಿ ಜಿಜಿಎಚ್ ಸರ್ಕಲ್ ಬಳಿ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದ್ದಾಗ ಬಿಸಿಲಿನ ತಾಪಕ್ಕೆ ದಣಿದು ಕುಸಿದು ಬಿದ್ದಿದ್ದರು.
ಈ ವೇಳೆ ಕಡಿಮೆ ರಕ್ತದೊತ್ತಡದಿಂದ ಅಸ್ವಸ್ಥರಾಗಿದ್ದ ಇವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ.