ಬೆಂಗಳೂರು,ಏ.೧೯-ಕನ್ನಡಿಗರಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ಕೇಂದ್ರದ ಅಬಕಾರಿ ಸೀಮಾ ಸುಂಕ ಹಾಗೂ ಸೇವಾ ತೆರಿಗೆ ಇಲಾಖೆಯ ಹುದ್ದೆಗಳ ದೈಹಿಕ ಪರೀಕ್ಷಾ ಸ್ಥಳಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ೫೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಎಂಜಿ ರಸ್ತೆಯ ಮಾಣಿಕ್ಶಾ ಪೆರೆಡ್ ಮೈದಾನದಲ್ಲಿ ನಡೆಯುತ್ತಿದ್ದ ಅಬಕಾರಿ ಸೀಮಾ ಸುಂಕ ಹಾಗೂ ಸೇವಾ ತೆರಿಗೆ ಇಲಾಖೆಯ ಹುದ್ದೆಗಳಿಗೆ ದೈಹಿಕ ಪರೀಕ್ಷೆಯ ಸ್ಥಳಕ್ಕೆ ನುಗ್ಗಿ ಪರೀಕ್ಷೆ ನಡೆಸದಂತೆ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸೇವಾ ತೆರಿಗೆ ಇಲಾಖೆಯ ಕರ್ನಾಟಕ ವಿಭಾಗದ ಖಾಲಿಯಿದ್ದ ೪೬೨ ಹುದ್ದೆಗಳ ನೇಮಕಾತಿಯಲ್ಲಿ ಕೇವಲ ೬ ಮಂದಿ ಕನ್ನಡಿಗರನ್ನು ಅಯ್ಕೆ ಮಾಡಿ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅರೋಪಿಸಿದರು.
ಸೇವಾ ತೆರಿಗೆ ಇಲಾಖೆಯ ಕರ್ನಾಟಕ ವಿಭಾಗದ ಖಾಲಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿ ಉತ್ತರ ಭಾರತೀಯರನ್ನು ಅಯ್ಕೆ ಮಾಡಿ ದೈಹಿಕ ಪರೀಕ್ಷೆ ನಡೆಸಲಾಗುತ್ತಿದೆ ಯಾವುದೇ ಕಾರಣಕ್ಕೂ ನಾವು ದೈಹಿಕ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕರ್ನಾಟಕ ವಿಭಾಗದ ಖಾಲಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಅದ್ಯತೆ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಂಡರೆ ಮಾತ್ರ ದೈಹಿಕ ಪರೀಕ್ಷೆಗೆ ಅವಕಾಶ ನೀಡಲಾಗುವುದು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಪ್ರತಿಭಟನೆ ನಡೆಸಿ ದೈಹಿಕ ಪರೀಕ್ಷೆಗೆ ಅವಕಾಶ ನೀಡದ ವೇದಿಕೆ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಕರ್ನಾಟಕ