ಮೈಸೂರು: ಮಹಿಳೆಯೊಬ್ಬರು ತನಗೆ ದೆವ್ವ ಕಾಟ ಕೊಡ್ತಿದೆ ಅಂತ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದೆ.
ಜಿಲ್ಲೆಯ ಜಯಪುರ ಹೋಬಳಿಯ ಮಾಂಬಳ್ಳಿ ಹುಂಡಿ ಗ್ರಾಮದ ಚಿಕ್ಕಣ್ಣೇಗೌಡ ಎಂಬವರ ಪತ್ನಿ ಕವಿತಾ ನಿನ್ನೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕವಿತಾ ಮೇಲೆ ಪದೇ ಪದೇ ಯಾರಾದ್ದೋ ಆತ್ಮ ಬರುತ್ತಿತ್ತು. ಹೀಗಾಗಿ ಇದಕ್ಕೆ ಹೆದರಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಆಕೆಯ ಕುಟುಂಬದವರು ಹೇಳಿದ್ದಾರೆ.
2010ರಲ್ಲಿ ಕವಿತಾ, ಚಿಕ್ಕಣ್ಣೇಗೌಡ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕೂಲಿ ಕೆಲಸ ಮಾಡೋ ಚಿಕ್ಕಣ್ಣೇಗೌಡ ಬರೋ ಕೂಲಿಯಲ್ಲೇ ಬದುಕನ್ನು ಚೆನ್ನಾಗಿ ಕಟ್ಟಿಕೊಂಡಿದ್ದರು. 2012ರಿಂದ ಕವಿತಾಗೆ ದೆವ್ವದ ಕಾಟ ಶುರುವಾಗಿತ್ತು. 15 ದಿನಕ್ಕೊಮ್ಮೆ ಯಾರದ್ದೋ ಆತ್ಮ ಕವಿತಾ ಮೈಯೊಳಗೆ ಸೇರಿ ಕೂಗಾಡುತ್ತಿತ್ತು. ಇದರಿಂದ ಕವಿತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಅಂತ ಹೇಳಲಾಗ್ತಿದೆ.
ಕವಿತಾ ಕುಟುಂಬದವರು ಆಕೆಗಾಗಿ ದೇವರ ಪೂಜೆ, ಮಾಟ, ಮಂತ್ರ ಎಲ್ಲವನ್ನೂ ಮಾಡಿಸಿದ್ದಾರೆ. ಅಲ್ಲದೆ, ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೊಟ್ಟೆ ನೋವು ಅಂತ ಬಳಲುತ್ತಿದ್ದ ಕವಿತಾ, ಒಂದೆರಡು ದಿನದಲ್ಲಿ ವಿಚಿತ್ರವಾಗಿ ಕೂಗಾಡುವುದಕ್ಕೆ ಶುರು ಮಾಡುತ್ತಿದ್ದರು. ಇದರಿಂದ ಈ ಕುಟುಂಬದವರು ಮಾತ್ರವಲ್ಲ, ಇಡೀ ಊರಿನ ಜನ ಬೆಚ್ಚಿಬಿದ್ದಿದ್ದರು ಅಂತ ಕವಿತಾ ಸಂಬಂಧಿಕರು ಹೇಳುತ್ತಾರೆ.
ಕವಿತಾ ಮೈಮೇಲೆ ಬರುತ್ತಿದ್ದ ಆತ್ಮ ಇಷ್ಟು ದಿನ ತನಗೆ ಬೇಕಾದ ಊಟ ಕೇಳುತ್ತಿತ್ತು. ಆದರೆ, ಇತ್ತೀಚೆಗೆ ಮಾಂಸದ ಊಟವನ್ನು ಹೆಚ್ಚಾಗಿ ಕೇಳೋಕೆ ಶುರು ಮಾಡಿತ್ತು. ಅಲ್ಲದೆ, ಕಳೆದ 15 ದಿನದ ಹಿಂದೆ ತನ್ನ ಜೊತೆಗೆ ಕವಿತಾಳನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿತ್ತು. ಇದರಿಂದ ಕವಿತಾ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು. ಅದೇ ಖಿನ್ನತೆಯಲ್ಲೇ ನಿನ್ನೆ ಸಂಜೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.