ಲಖನೌ: ಕುಡುಕ ಚಾಲಕನ ಅತಿಯಾದ ಮಧ್ಯ ಸೇವನೆ ಹಾಗೂ ಅತಿಯಾದ ವೇಗದಿಂದಾಗಿ ರಸ್ತೆ ಬದಿಯಲ್ಲಿ ಜಾನಪದ ನೃತ್ಯ ನೋಡುತ್ತಿದ್ದ ಮಂದಿ ಸಾವಿಗೀಡಾದ ಧಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಡಿಯೋರಾ ಜಿಲ್ಲೆಯಲ್ಲಿ ಈ ಭೀಕರ ಕಾರು ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕನಿಷ್ಠ 6 ಮಂದಿ ಸಾವಿಗೀಡಾಗಿ 19ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರ ಪೈಕಿ ಇಬ್ಬರು ಮಹಿಳೆಯರು ಮತ್ತು ನಾಲ್ಕು ಮಂದಿ ಪುರುಷರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಕುಡುಕ ಚಾಲಕ ಕಾರು ಬಿಟ್ಟು ಪರಾರಿಯಾಗಲು ಯತ್ನಿಸಿದ್ದು, ಚಾಲಕನನ್ನು ಹಿಡಿದ ಸ್ಥಳೀಯರು ಆತನನ್ನು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ
ಉತ್ತರ ಪ್ರದೇದಶ ಡಿಯೋರಾ ಜಿಲ್ಲೆಯ ಪನ್ನಾಹ್ ಗ್ರಾಮದಲ್ಲಿ ನಿನ್ನೆ ರಾತ್ರಿ ಜಾನಪದ ನೃತ್ಯ ಕಾರ್ಯಕ್ರಮ ಆಯೋಜನೆಯಾಗಿತ್ತು. ನೃತ್ಯ ಕಾರ್ಯಕ್ರಮವನ್ನು ನೋಡಲು ಹತ್ತಾರು ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದರು. ರಸ್ತೆ ಬದಿಯಲ್ಲೇ ಒಂದಷ್ಟು ಜಾಗವಿದ್ದರಿಂದ ಅಲ್ಲಿಯೇ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ನೃತ್ಯ ಕಾರ್ಯಕ್ರಮ ಚಾಲ್ತಿಯಲ್ಲಿರುವಂತೆಯೇ ವೇಗವಾಗಿ ಬಂದ ಕಾರು ನೋಡ ನೋಡುತ್ತಿದ್ದಂತೆಯೇ ಅಲ್ಲಿ ಕುಳಿತು ನೃತ್ಯ ನೋಡುತ್ತಿದ್ದ ಪ್ರೇಕ್ಷಕರ ಮೇಲೆ ಹರಿದಿದೆ. ಸ್ಥಳದಲ್ಲೇ 4 ಮಂದಿ ಸಾವನ್ನಪ್ಪಿದ್ದರೆ ಮತ್ತೆ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಅಲ್ಲದೆ ಘಟನೆಯಲ್ಲಿ 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ಕು ಜನರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.