ಬೆಂಗಳೂರು, ಏ.14- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಮಾಡಿದ್ದು, ಕಾಂಗ್ರೆಸ್ ಇಂತಹ ಪಕ್ಷದ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಬಿಜೆಪಿ ಬಗ್ಗೆ ಮಾತನಾಡುವ ಕನಿಷ್ಠ ಯೋಗ್ಯತೆಯನ್ನು ಇಟ್ಟುಕೊಂಡಿಲ್ಲ ಎಂದು ಕೇಂದ್ರ ಸಚಿವ ಅನಂತ್ಕುಮಾರ್ ವಾಗ್ದಾಳಿ ನಡೆಸಿದರು. ಪಕ್ಷದ ಕಚೇರಿಯಲ್ಲಿ ನಡೆದ ಬಿ.ಆರ್.ಅಂಬೇಡ್ಕರ್ ಅವರ 125 ಜನ್ಮದಿನಾಚರಣೆ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಜೆಪಿ ಸಂವಿಧಾನವಿರೋಧಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 1977ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದೇ ದೊಡ್ಡ ಸಂವಿಧಾನ ವಿರೋಧಿ ಕೆಲಸ. ಇದರ ಬಗ್ಗೆ ಸಿದ್ದರಾಮಯ್ಯ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು. ವಾಕ್ಸ್ವಾತಂತ್ರ್ಯ, ಪತ್ರಿಕಾಸ್ವಾತಂತ್ರ್ಯ ಸೇರಿದಂತೆ ಎಲ್ಲರನ್ನು ಧಮನ ಮಾಡಿ ಜೈಲಿಗಟ್ಟಿದ್ದು, ಇಂದಿರಾಗಾಂಧಿ ಇದನ್ನು ಮರೆತಿರುವ ಮುಖ್ಯಮಂತ್ರಿಗಳು ಬಿಜೆಪಿ ಬಗ್ಗೆ ಮನಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಗುಡುಗಿದರು.
ಅಂಬೇಡ್ಕರ್ ಅವರು ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ಅವರೆದುರು ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪರಾಭವಗೊಳಿಸಿದ್ದು, ನೆಹರು ಸಂಸತ್ತಿನೊಳಗೆ ಕಾಲಿಡದಂತೆ ಕಾಂಗ್ರೆಸ್ ಷಡ್ಯಂತ್ರ ರೂಪಿಸಿತ್ತೆಂದು ಕಿಡಿಕಾರಿದರು. ಅಂಬೇಡ್ಕರ್ ರಾಜ್ಯಸಭಾ ಸದಸ್ಯರಾಗಲಿ, ಜನಸಂಘ ಬೆಂಬಲ ಸೂಚಿಸಿತು. ಇಂದು ವಿಶ್ವಸಂಸ್ಥೆಯಲ್ಲಿ ಅವರ ಜನ್ಮದಿನಾಚರಣೆ ಮಾಡುತ್ತಿರುವುದು ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಸಂದ ಗೌರವ ಎಂದು ನುಡಿದರು.
ನಿರ್ಗಮಿತ ರಾಜ್ಯಾಧ್ಯಕ್ಷ ಪ್ರಹ್ಲಾದ್ಜೋಷಿ ಮಾತನಾಡಿ, ಅಂಬೇಡ್ಕರ್ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ. ಆದರೆ, ಕೆಲವರು ಅವರನ್ನು ಓಟ್ಬ್ಯಾಂಕ್ ರಾಜಕಾರಣ ಮಾಡಿಕೊಳ್ಳಲು ಸೀಮಿತಗೊಳಿಸಿದ್ದಾರೆ ಎಂದು ಕಿಡಿಕಾರಿದರು. ಮಾಜಿ ಸಚಿವ ಗೋವಿಂದಕಾರಜೋಳ ಮತ್ತಿತರರು ಮಾತನಾಡಿದರು.