ಬೆಂಗಳೂರು,ಏ.೧೦-ಅಣ್ಣನ ತಿಥಿ ಕಾರ್ಯಕ್ಕೆ ಕುಟುಂಬದೊಂದಿಗೆ ಹೋಗಿದ್ದ ವಕೀಲರೊಬ್ಬರ ಮನೆಯ ಮುಂಭಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ನಗದು ಚಿನ್ನ ಬೆಳ್ಳಿ ಸೇರಿ ೧೪ ಲಕ್ಷ ಮೌಲ್ಯದ ಮಾಲುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಶಾಂಪುರದ ಮುನೀರಪ್ಪ ಲೇಔಟ್ನಲ್ಲಿ ನಡೆದಿದೆ.
ವಕೀಲರಾದ ರಾಮಮೂರ್ತಿ ಅವರು ಮೂರ್ನಾಲ್ಕು ದಿನಗಳ ಹಿಂದೆ ಇತ್ತೀಚಿಗಷ್ಟೇ ಮೃತಪಟ್ಟಿದ್ದ ಅಣ್ಣನ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲು ಕುಟುಂಬದೊಂದಿಗೆ ಮುನಿವೀರಪ್ಪ ಲೇಔಟ್ನ ಮೊದಲ ಕ್ರಾಸ್ನ ಮನೆಗೆ ಬೀಗಹಾಕಿಕೊಂಡು ಊರಿಗೆ ಹೋಗಿದ್ದರು.
ತಿಥಿ ಕಾರ್ಯ ಮುಗಿಸಿಕೊಂಡು ನಿನ್ನೆ ಸಂಜೆ ಮನೆಗೆ ವಾಪಸಾಗಿ ಬಂಧು ನೋಡಿದಾಗ ಮನೆಯ ಮುಂಭಾಗಿಲು ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ೨೦ ಸಾವಿರ ನಗದು ೩೩ ಗ್ರಾಂ ಚಿನ್ನ ೧.೫ ಬೆಳ್ಳಿ ಸೇರಿ ೧೪ ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ದೇವರಜೀವನಹಳ್ಳಿ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.