ಬೆಂಗಳೂರು, ಏ.1- ಕಾಲ್ಸೆಂಟರ್ ಉದ್ಯೋಗಿಯೊಬ್ಬರು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೀವನಬಿಮಾ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಡಿಹಳ್ಳಿಯ ಲೀಲಾಪ್ಯಾಲೆಸ್ ರಸ್ತೆ, 26ನೇ ಕ್ರಾಸ್ ನಿವಾಸಿ ಸಾಧನ(25) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ. ಕಾಲ್ಸೆಂಟರ್ ಒಂದರ ಎಚ್ಆರ್ ವಿಭಾಗದಲ್ಲಿ ಉದ್ಯೋಗಿಯಾಗಿರುವ ಇವರು ನಿನ್ನೆ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ 12 ಗಂಟೆಗೆ ಮನೆಗೆ ವಾಪಸ್ಸಾಗಿ ಕೊಠಡಿ ಸೇರಿಕೊಂಡಿದ್ದಾರೆ.
ಮನೆಯಲ್ಲೇ ಇದ್ದ ತಂದೆ ಮಧ್ಯಾಹ್ನ 2.30ರಲ್ಲಿ ಊಟಕ್ಕೆಂದು ಮಗಳನ್ನು ಕರೆದರೂ ಪ್ರತಿಕ್ರಿಯೆ ಬಾರದ ಕಾರಣ ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಆಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣ. ಏನೂ ಸಾಧನೆ ಮಾಡಲು ಆಗಿಲ್ಲ ಎಂದು ಪತ್ರ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿದ್ದ ಸಾಧನ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದಳು ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜೀವನಬಿಮಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.