ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆ ಕುರಿತು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿರುವ ವರದಿಯನ್ನು ಸದನದಲ್ಲಿ ಮಂಡಿಸಲು ತಾವು ನೀಡಿರುವ ರೂಲಿಂಗನ್ನು ಸರ್ಕಾರ ಪಾಲಿಸುತ್ತಿಲ್ಲ ಎಂದು ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.
ಸಭಾಪತಿಯವರ ಜೊತೆಗೆ ಉಪ ಸಭಾಪತಿ ಮರಿತಿಬ್ಬೇಗೌಡ ಅವರೂ ರಾಜಭವನಕ್ಕೆ ತೆರಳಿದ್ದರು. ಈ ವೇಳೆ ಅನ್ವರ್ ಮಣಿಪ್ಪಾಡಿ ವರದಿ ಬಗ್ಗೆ ವಿಧಾನ ಪರಿಷತ್ ನಲ್ಲಿ ನಡೆದ ಕಲಾಪದ ವಿವರ ನೀಡುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಭಾಪತಿ ಶಂಕರಮೂರ್ತಿ ಅವರಿಗೆ ಸೂಚಿಸಿದ್ದಾರೆ.
ಮಾಣಿಪ್ಪಾಡಿ ವರದಿಯನ್ನು ಸರ್ಕಾರ ಮಂಡಿಸದೇ ಇರುವುದನ್ನು ವಿರೋಧಿಸಿ ನಿನ್ನೆ ಬೆಳಿಗ್ಗೆಯಿಂದಲೇ ಪರಿಷತ್ತಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ತೀವ್ರ ಗಲಾಟೆ ಮುಂದುವರೆದ ಹಿನ್ನಲೆಯಲ್ಲಿ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.
ವರದಿ ಮಂಡಿಸುವಂತೆ ಸಭಾಪತಿಗಳು 3 ಬಾರಿ ರೂಲಿಂಗ್ ನೀಡಿದ್ದಾರೆ. ಅಲ್ಲದೆ ಸರ್ಕಾರವೂ ಒಪ್ಪಿಕೊಂಡಿದೆ. ಈಗ ವರದಿ ಮಂಡನೆ ಮಾಡುವುದನ್ನು ಬಿಟ್ಟು ಸಭಾಪತಿಗಳ ರೂಲಿಂಗ್ ಅನ್ನು ಮರುಪರಿಶೀಲಿಸಿ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ಕಾನೂನು ಸಚಿವರಾಗಿ ಟಿ ಬಿ ಜಯಚಂದ್ರ ಕಾನೂನು ಪರಿಪಾಲಿಸಲಿ, ಇಲ್ಲವೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.