ಬಂಗಾರಪೇಟೆ: ಮದುವೆಯಾಗಿ ಎಂಟು ತಿಂಗಳು ಕಳೆಯುತ್ತಿದ್ದಂತೆಯೇ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲೂಕಿನ ಪಿಲ್ಲಗೊಂಡ್ಲಹಳ್ಳಿ ಗ್ರಾಾಮದ ನಿವಾಸಿ ಆರೋಪಿ ಹರಿಪ್ರಸಾದ್, ಮದುವೆ ಸಂದರ್ಭದಲ್ಲಿ 70 ಸಾವಿರ ಮೌಲ್ಯದ ಬಂಗಾರದ ಚೈನು, ಉಂಗುರ, ಕೈ ಬಳೆ ಹಾಗೂ 5 ಲಕ್ಷ ರು. ವರದಕ್ಷಿಣೆ ಪಡೆದು ವಿವಾಹವಾಗಿದ್ದ ಎಂದು ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಮದುವೆಯಾದ ಒಂದು ತಿಂಗಳು ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ಹೆಚ್ಚಿನ ವರದಕ್ಷಿಣೆಗಾಗಿ ಗಂಡನ ಮನೆಯವರು ಊಟವನ್ನು ನೀಡದೆ ದೈಹಿಕ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಮಹಿಳೆ ದೂರಿದ್ದಾಳೆ.
ದೂರಿನ ಮೇರೆಗೆ ಆರೋಪಿ ಹರಿಪ್ರಸಾದ್, ಕೃಷ್ಣಮೂರ್ತಿ ಮತ್ತು ಪೂರ್ಣಜ್ಯೋತೀಶ್ವರಿ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.