ಚೆಟ್ಟಳ್ಳಿ(ಕೊಡಗು): ಕೊಡಗಿನಲ್ಲಿ ಕಾಡಾನೆ ದಾಳಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆನೆ ಹಾವಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಮುಂದುವರಿದಿದ್ದು, ಬುಧವಾರ ಮತ್ತೋರ್ವ ಮಹಿಳೆ ಆನೆ ತುಳಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಪೊನ್ನತ್ತಮೊಟ್ಟೆ ನಿವಾಸಿ ಆಮಿನ(48) ಮೃತ ಕಾರ್ವಿುಕ ಮಹಿಳೆ. ಬುಧವಾರ ಬೆಳಗ್ಗೆ 8.15 ಸುಮಾರಿಗೆ 8 ಮಂದಿ ತೋಟದ ಕೆಲಸಕ್ಕೆಂದು ಗ್ರೀನ್ಲ್ಯಾಂಡ್ ಎಸ್ಟೇಟ್ಗೆ ತೆರಳುತ್ತಿದ್ದರು. ಈ ವೇಳೆ ಭೂತನಕಾಡು ಬಳಿ 7ಕ್ಕೂ ಅಧಿಕ ಆನೆಗಳು ದಾಳಿ ನಡೆಸಿವೆ. ಜತೆಯಲ್ಲಿದ್ದವರು ಓಡಿ ತಪ್ಪಿಸಿಕೊಂಡಿದ್ದರೆ, ಆಮಿನ ಓಡಲು ಸಾಧ್ಯವಾಗದೆ ಆನೆ ಸಿಟ್ಟಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರಸ್ತೆ ತಡೆ ನಡೆಸಲು ಮುಂದಾದ ಕಾರ್ವಿುಕರನ್ನು ಸುಂಟಿಕೊಪ್ಪ ಪಿಎಸ್ಐ ಹರಿವರ್ಧನ್ ಮನವೊಲಿಸಿದರು.