ಕುಣಿಗಲ್: ಪ್ರೇಮಿಸಿ ವಿವಾಹವಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಶೃಂಗಾರಸಾಗರ ಗ್ರಾಮದಲ್ಲಿ ನಡೆದಿದೆ.
ಹುಲಿಯೂರುದುರ್ಗ ಪಂಚವಟಿ ತಾಂಡ್ಯದ ವಾಸಿ ಕಾವ್ಯ (17) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ. ಮನೆಯಲ್ಲೆ ಕಾವ್ಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತಳ ಅಣ್ಣ ನರಸಿಂಹನಾಯ್ಕ ಹುಲಿಯೂರುದುರ್ಗ ಠಾಣೆ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾವ್ಯ ಹಾಗೂ ಹುಲಿಯೂರುದುರ್ಗ ಶೃಂಗಾರಸಾಗರ ಗ್ರಾಮದ ಸತೀಶ್ ಒಬ್ಬೊರನ್ನೊಬ್ಬರು ಪ್ರೀತಿಸಿ ಕಳೆದ ಎರಡು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದರು. ಕಾವ್ಯ ಹಾಗೂ ಸತೀಶ್ ಇಬ್ಬರು ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಇಬ್ಬರು ಪ್ರೇಮ ಹಾಗೂ ಮದುವೆ ವಿಚಾರ ಎರಡು ಮನೆಯವರಿಗೆ ತಿಳಿದಿರಲಿಲ್ಲ. ನಂತರ ಕುಟುಂಬದವರಿಗೆ ತಿಳಿದು ಬಂದಿದೆ ಎನ್ನಲಾಗಿದೆ.
ಕಾವ್ಯ ಇದ್ದಕ್ಕಿದ್ದಂತೆ ತನ್ನ ಮನೆಯಲ್ಲಿ ನೇಣು ಹಾಕಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರ ತನಿಖೆಯಿಂದಷ್ಟೆ ಸತ್ಯಾಂಶ ಹೊರಬರಬೇಕಾಗಿದೆ.