ಕರ್ನಾಟಕ

ಆಸ್ತಿಯ ದುರಾಸೆಯಿಂದ ಗಂಡನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಮಗಳು..!

Pinterest LinkedIn Tumblr

astiಕಡೂರು, ಮಾ.15-ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಸಂಬಂಧಿಕರ ವಿರುದ್ಧ ದೂರು ನೀಡಿದ್ದ ಮಗಳು ಹಾಗೂ ಆಕೆ ಗಂಡನನ್ನು ಕೃತ್ಯ ನಡೆದ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಯಗಟಿ ಹೋಬಳಿ ಕುಂಕಾನಾಡು ಗ್ರಾಮದ ವಾಸಿ ಲಕ್ಷ್ಮಮ್ಮ (80) ಹೆತ್ತ ಮಗಳಿಂದಲೇ ಹತ್ಯೆಯಾದ ವೃದ್ಧೆ. ಸುಶೀಲ(35), ಈಕೆ ಗಂಡ ಮಹೇಶ(40) ಬಂಧಿತ ಹಂತಕರು. ಲಕ್ಷ್ಮಮ್ಮ ಹೊಂದಿದ್ದ ಜಮೀನನ್ನು ತಮ್ಮ ವಶಕ್ಕೆ ಪಡೆಯುವ ದುರಾಸೆಯಿಂದ ಗಂಡನ ಜತೆ ಸೇರಿ ಸುಶೀಲ ಹೆತ್ತ ತಾಯಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ.

ಅದರಂತೆ ಶನಿವಾರ ತಡ ರಾತ್ರಿ ಮಗಳು ಅಳಿಯ ಸೇರಿ ಲಕ್ಷ್ಮಮ್ಮಳನ್ನು ಕೊಲೆ ಮಾಡಿ ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿ ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳು ಮನೆ ಹೆಂಚು ತೆಗೆದು ಒಳ ನುಗ್ಗಿ ತಾಯಿ ಲಕ್ಷ್ಮಮ್ಮ ಅವರನ್ನು ತೆಗಿನ ಕಾಯಿ ಸುಲಿಯುವ ಹಾರೆಯಿಂದ ಚುಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಆಸ್ತಿಗಾಗಿ ಸಂಬಂಧಿಕರೆ ಕೊಲೆ ಮಾಡಿಸಿದ್ದಾರೆಂದು ಶಂಕಿಸಿ ಕೆಲವು ಸಂಬಂಧಿಕರ ಹೆಸರನ್ನು ದೂರಿನಲ್ಲಿ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ತಮ್ಮ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಹೇಳಿ ಸರ್ಕಾರಿ ಆಸ್ಪತ್ರೆಗೂ ದಾಖಲಾಗಿದ್ದಾರೆ.

ಸುದ್ದಿ ತಿಳಿದು ಡಿವೈಎಸ್‌ಪಿ ರಾಜನ್ ವೈನಾಯಕ್, ಸಿಪಿಐ ಸಿ.ಮಧುಸೂದನ್, ಪಂಚನಹಳ್ಳಿ ಪಿಎಸ್‌ಐ ಬಸವರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಮಗಳು ಅಳಿಯನ ಮೇಲೆ ಅನುಮಾನ ಬಂದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆಸ್ತಿಗಾಗಿ ಮಗಳು-ಅಳಿಯನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ದೂರಿನಲ್ಲಿ ಹೆಸರಿಸಿದ್ದ ಸಂಬಂಧಿಕರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದು, ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂಬುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಿಂದ ಮುಕ್ತರಾಗಲು ಆರೋಪಿಗಳು ಕತೆಕಟ್ಟಿ ಸಂಬಂಧಿಕರ ಮೇಲೆ ಆರೋಪ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment