`ಕೃಷ್ಣ ರುಕ್ಕು` ಚಿತ್ರ ಯಶಸ್ವಿಯಾಗಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ನಿರ್ಮಾಪಕ ಉದಯ್ ಮೆಹ್ತಾ ಸಂತಸ ವ್ಯಕ್ತಪಡಿಸಿದ್ದಾರೆ.
ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ `ಕೃಷ್ಣ ರುಕ್ಕು` ಚಿತ್ರವನ್ನು ಪ್ರೇಕ್ಷಕರು ಸ್ವೀಕರಿಸಿದ್ದಾರೆ. ಒಳ್ಳೆಯ ಗುಣಮಟ್ಟದ ಸಿನಿಮಾವನ್ನು ಪ್ರೇಕ್ಷಕರು ಕೈಬಿಡಲಾರರು ಎನ್ನುವುದನ್ನು ನಮ್ಮ ಚಿತ್ರ ಸಾಭೀತುಪಡಿಸಿದೆ ಎಂದರು ಮೆಹ್ತಾ.
`ಕೃಷ್ಣ ರುಕ್ಕು` ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಅವರು, ಚಿತ್ರವು ತೆಲುಗಿನ ರಿಮೇಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಅದು ಪ್ರೇಕ್ಷಕರಿಗೆ ಇಷ್ಟವಾಗಿದೆ ಎನ್ನುತ್ತಾರೆ.
ಸಂಗೀತ ನೀಡಿರುವ ಶ್ರೀಧರ್ ಸಂಭ್ರಮ್ ಅವರು ಚಿತ್ರವು ಜನರಿಗೆ ಅಚ್ಚುಮೆಚ್ಚಿನ ಸಿನಿಮಾ ಎನಿಸಿದೆ. ಸ್ವಿಡ್ಜರ್ಲ್ಯಾಂಡ್ನಲ್ಲಿ ಚಿತ್ರೀಕರಣ ಮಾಡಿರುವ ದೃಶ್ಯಗಳು ಪ್ರೇಕ್ಷಕರನ್ನು ಮೋಡಿ ಮಾಡಿವೆ. ಹಾಡುಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿವೆ ಎಂದು ಹೇಳಿಕೊಂಡರು.
ಸಿನಿಮಾ ಗೆಲ್ಲಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. `ಕೃಷ್ಣ ರುಕ್ಕು` ಸಿನಿಮಾ ಗೆಲ್ಲಿಸಿರುವುದು ಇನ್ನೂ ಹಲವು ಇಂತಹ ಸಿನಿಮಾ ಮಾಡಲು ಪ್ರೇರಣೆಯಾಗಿದೆ ಎನ್ನುತ್ತಾರೆ.
ನಾಯಕಿ ಅಮೂಲ್ಯ ಚಿತ್ರವು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ. `ಕೃಷ್ಣ ರುಕ್ಕು` ಒಳ್ಳೆಯ ಸಿನಿಮಾ ಎಂದರೆ ನಾಯಕ ಅಜಯ್ ರಾವ್ ಚಿತ್ರವು ಯಶಸ್ವಿಯಾಗಿರುವುದು ಖುಷಿಯಾಗಿದೆ. ನಮ್ಮನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಕೃಷ್ಣನ ಸರಣಿ ನಮ್ಮನ್ನು ಕೈಬಿಟ್ಟಿಲ್ಲ. ಮನರಂಜನಾತ್ಮಕ ಸಿನಿಮಾ ಇದು ಎಂದು ಹೇಳಿಕೊಂಡರು.
ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಅನಿಲ್ ಚಿಕ್ಕಮಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದರೂ ಬೇರೆ ತರಹದ ಫೀಲಿಂಗ್ ಅನ್ನು ಪ್ರೇಕ್ಷಕರಿಗೆ ನೀಡಲಿದೆ. ಇನ್ನಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನುತ್ತಾರೆ.