ಮಾಲೂರು, ಮಾ.10-ಕೋಲಾರ-ಚಿಕ್ಕಬಳ್ಳಾಪುರ ರೈತರು ಎಷ್ಟೇ ಸಂಕಷ್ಟದಲ್ಲಿದ್ದರು ಸಹ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಮತ್ತು ಉತ್ತಮ ಗುಣಮಟ್ಟದ ಹಾಲು ನೀಡುವ ರೈತರಿರುವುದು ಸಂತಸ ತಂದಿದೆ ಎಂದು ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ತಿಳಿಸಿದರು. ಕೋಚಿಮುಲ್ ಕಚೇರಿಯಲ್ಲಿ ಪಶು ಆಹಾರ ಸಮತೋಲನಕರಿಸುವ ಬಗ್ಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ 10 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಸು ಕಟ್ಟಿಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡುವುದರ ಜೊತೆಗೆ ಸಂಸಾರವನ್ನು ಸಾಗಿಸುತ್ತಿರುವ ರೈತರು ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೂಂಡು ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುವಂತಹ ಹೈನುಗಾರಿಕೆಯನ್ನು ಮಾಡಿ ಎಂದು ಸಲಹೆ ನೀಡಿದರು. ಸರ್ಕಾರದಿಂದ ಸಿಗುವ ಹಸು ವಿಮೆ, ತರಬೇತಿ ಕಾರ್ಯಾಗಾರಗಳು ಜತೆಗೆ ಮೇವು ಕಟಾವು ಮಾಡುವ ಯಂತ್ರವನ್ನು ಸಬ್ಸಿಡಿ ಮೂಲಕ ನೀಡಲಾಗುತ್ತದೆ. ಅದರ ಲಾಭವನ್ನು ರೈತನು ಪಡೆಯಬೇಕು ಎಂದರು.
15 ಮಂದಿ ಅರ್ಹ ಫಲಾನುಭವಿಗಳಿಗೆ ಲ್ಯಾಪ್ ಟಾಪ್ ನೀಡಲಾಗುತ್ತಿದ್ದು ಬರುವ ದಿನಗಳಲ್ಲಿ ಎಲ್ಲಾ ಸಂಘಗಳಿಗೂ ನೀಡುವ ಗುರಿಯಿದೆ ಎಂದರು. ಕಾರ್ಯಕ್ರಮದಲ್ಲಿ ಉಪವ್ಯವಸ್ಥಾಪಕ ಎಲ್.ರಾಘವೇಂದ್ರ, ಗ್ರಾಪಂ ಸದಸ್ಯರಾದ ಕೋಟೆ ಮುನಿರಾಜು, ರಾಮು, ಮಲ್ಲೇಶ್, ನಂಜುಂಡಯ್ಯ, ಮುನಿವೆಂಕಟೇಗೌಡ ಇತರರು ಹಾಜರಿದ್ದರು.