ಬೆಂಗಳೂರು, ಮಾ.5- ಇಲವಾಲ ಪ್ರಕರಣದಲ್ಲಿ ಜಪ್ತಿಯಾದ ಅಕ್ರಮ ಹಣದ ಪ್ರಕರಣದಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಎಚ್.ಡಿ.ಕುಮಾರ ಸ್ವಾಮಿಯವರು ಇಲವಾಲದಲ್ಲಿ ಜಪ್ತಿಯಾಗಿದ್ದು 2.28 ಕೋಟಿ ರೂ. ಆದರೆ ಠಾಣೆಗೆ ತಂದ ಪೊಲೀಸರು 28 ಲಕ್ಷ ಮಾತ್ರ ಲೆಕ್ಕ ತೋರಿಸಿದರು. ಇದು ವಿವಾದಕ್ಕೀಡಾದಾಗ 60 ಲಕ್ಷ ರೂ.ಗಳಿಗೆ ಬಗೆ ಹರಿಸಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳು ಧ್ವನಿ ಎತ್ತಿದವರಿಗೆ ಸಲಹೆ ನೀಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜಾರ್ಜ್ ಅವರು, ಈ ಪ್ರಕರಣದಲ್ಲಿ ಸಿಐಡಿ ತನಿಖೆ ಆದೇಶಿಸ ಲಾಗಿತ್ತು. ಅವರು ವರದಿ ನೀಡಿದ ನಂತರ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಆ ವರದಿಯನ್ನು ಪೊಲೀಸ್ ಮಹಾನಿದೇರ್ಶಕರಿಗೆ ಕಳುಹಿಸಲಾಗಿತ್ತು ಎಂದು ಹೇಳಿದರು. ಮಾತು ಮುಂದುವರೆಸಿದ ಕುಮಾರಸ್ವಾಮಿ ಯವರು, ಮಟ್ಕಾ ದಂಧೆ ರಾಜ್ಯಾದ್ಯಂತ ರಾಜಾರೋಷವಾಗಿ ನಡೆಯುತ್ತಿದೆ. ಬಡವರ ಬದುಕನ್ನು ಹಾಳು ಮಾಡುವ ಈ ದಂಧೆಯ ಬಗ್ಗೆ ಕೇಳುವವರಿಲ್ಲದಾಗಿದೆ. ಮಧ್ಯಪ್ರವೇಶಿಸಿದ ಲಿಂಗಸೂರು ಕೇತ್ರದ ಶಾಸಕ ಮಾನಪ್ಪ ವಜ್ಜಲ್ ಮತ್ತು ಪಾವಗಡ ಕ್ಷೇತ್ರದ ತಿಮ್ಮರಾಯಪ್ಪ ಎಂಬ ಪೊ ಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ನೀಡಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, ನನ್ನ ಕ್ಷೇತ್ರದಲ್ಲಿ ಮಟ್ಕಾ ಹಾಗೂ ಮರಳು ದಂಧೆಗೆ ಕಡಿವಾಣ ಹಾಕಿದೆ. ಇದರಿಂದ ಬೇಸರಗೊಂಡ ನಮ್ಮ ಪಕ್ಷದ ಕಾರ್ಯಕರ್ತರು ಆ ಕಡೆ ಹೋಗಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರತ್ತಬೆರಳು ತೋರಿಸಿದರು ಎಂದು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ದಲಿತ ಇಂಜಿನಿ ಯರ್ ಹುಡುಗನನ್ನು ಬಂಽಸಲು ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಆತನ ವಿರುದ್ಧ ಕೇಸು ಇರುವುದಿಲ್ಲ, ಆದರೆ ಆ ಹುಡುಗನ ಹುಡುಕಾಟ ನಡೆದಿರುತ್ತದೆ. ಜಾಮೀನು ಪಡೆಯಲು ಕೇಸು ದಾಖಲಾಗಿಲ್ಲ ಎಂದು ವಕೀಲರು ಹೇಳುತ್ತಾರೆ. ಕೊನೆಗೆ ಹೇಗೋ ಜಾಮೀನು ಪಡೆದು ಮನೆಗೆ ಬಂದರೆ ಎಸ್ಪಿಯವರು ಕರೆಯುತ್ತಿದ್ದಾರೆ ಎಂದು ಕರೆದುಕೊಂಡು ಹೋಗಿ ಮತ್ತೆ ಬಂಧಿಸಲಾಗಿದೆ ಎಂದು ಹೇಳಿದರು.
ಮಡಿಕೇರಿಯಲ್ಲಿ ಇಂಜಿನಿಯರ್ 10 ಲಕ್ಷ ಬಂಡವಾಳ ಹಾಕಿದ್ದೇನೆ ಎಂದು ಮರಳುದಂಧೆ ಕೋರರ ಬಳಿ ಧೈರ್ಯವಾಗಿ ಹೇಳುತ್ತಾನೆ, ಚಿತ್ರದುರ್ಗದಲ್ಲಿ ಉಪ ವಿಭಾಗಾಧಿಕಾರಿಯೂ ಭ್ರಷ್ಟಚಾರದ ಬಗ್ಗೆ ಬಹಿರಂಗ ಚರ್ಚೆ ಮಾಡಿದ್ದಾರೆ. ಇಂತಹ ಅಧಿಕಾರಿಗಳ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.ಹೈಕೋರ್ಟ್ನ ಹಾಲಿ ನ್ಯಾಯಾಧೀಶರೊಬ್ಬರು ತಮ್ಮ ಬಳಿ 100 ಕೋಟಿ ಹಗರಣದ ಬಗ್ಗೆ ದಾಖಲೆ ಇದೆ ಎಂದು ಹೇಳುತ್ತಾರೆ. ಅವನ್ನು ಕೊಡಿ ಎಂದು ಅಡ್ವೋಕೆಟ್ ಜನರಲ್ ಅವರು ಕೇಳಿದಾಗ ಈಗ ಕೊಟ್ಟರೆ ಅದು ಮುಚ್ಚಿ ಹೋಗುತ್ತದೆ. ನಾನು ನಿವೃತ್ತ ರಾದ ನಂತರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಮಾಹಿತಿ ಇದೆ ಎಂದು ಸುಳ್ಳು ಹೇಳುವುದು ಅಪ ರಾಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇದು ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆ ಎಂದು ಕುಮಾರಸ್ವಾಮಿ ಹೇಳಿದರು.