ಬೆಂಗಳೂರು: ಡಿಸೆಂಬರ್ ೨೮, ೨೦೧೪ ರಲ್ಲಿ ನಡೆದ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಇನ್ನೂ ಯಶಸ್ವಿಯಾಗಿಲ್ಲ. ಈ ಲಘು ಬಾಂಬ್ ಸ್ಫೋಟದಿಂದ ಒಬ್ಬ ಮೃತಪಟ್ಟು ಮೂರು ಜನರಿಗೆ ಗಾಯವಾಗಿತ್ತು. ಬೆಂಗಳೂರಿನ ಪೊಲೀಸರು ಮೊದಲಿಗೆ ತನಿಖೆ ನಡೆಸಿದರಾದರೂ ಇದನ್ನು ಬಗೆ ಹರಿಸುವುದಕ್ಕೆ ವಿಫಲರಾಗಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ ಐ ಎ) ಈ ಪ್ರಕರಣ ವಹಿಸಿಕೊಟ್ಟಿತ್ತು.
ಈಗ ಎನ್ ಐ ಎ, ಸ್ಫೋತಗೊಂಡ ದಿನ ರಾತ್ರಿ ೭ ಘಂಟೆಗೆ ತೆಗೆಯಗಾಗಿರುವ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದು, ಬಾಂಬ್ ಇಟ್ಟಿದ್ದಾನೆ ಎಂದು ಶಂಕಿಸಲಾಗಿರುವ ವ್ಯಕ್ತಿಯ ಗುರುತು ನೀಡಿದರೆ ಐದು ಲಕ್ಷ ಬಹುಮಾನ ನೀಡುವುದಾಗಿ ತಿಳಿಸಿದೆ.
ಬೇಸ್ ಬಾಲ್ ಟೋಪಿ ಹಾಕಿಕೊಂಡು ಪ್ಲಾಸ್ಟಿಕ್ ಚೀಲ ಹಿಡಿದ ಈ ವ್ಯಕ್ತ್ಯಿ ಬಾಂಬ್ ಇಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಈ ವ್ಯಕ್ತಿ ಈ ಸ್ಥಳಕ್ಕೆ ಇದಕ್ಕೂ ಮೊದಲು ಮೂರೂ ಬಾರಿಗೆ ಬಂದಿದ್ದ ಎನ್ನಲಾಗಿದೆ.
ಇದಕ್ಕೂ ಮೊದಲು ತನಿಖಾಧಿಕಾರಿಗಳು ನಿಷೇಧಿತ ಸಂಘಟನೆ ಸಿಮಿ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಿದ್ದರು. ಆದರೆ ಯಾವುದೇ ಖಚಿತ ಸಾಕ್ಷ್ಯಗಳು ಸಿಗದೆ ಈ ಸ್ಫೋಟದ ಹಿಂದಿನ ಕಾರಣ ಏನಿರಬಹುದು ಎಂದು ತನಿಖೆ ನಡೆಸಲು ಸಾಧ್ಯವಾಗಿಲ್ಲ.