ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್ಐಟಿ)ದಿಂದ ಮತ್ತೆ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಗಾಲಿ ಜರ್ನಾದನ ರೆಡ್ಡಿ ಅವರಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, 2 ಲಕ್ಷ ರುಪಾಯಿ ಮೌಲ್ಯದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದೆ. ಅಲ್ಲದೆ ಸಾಕ್ಷ್ಯ ನಾಶಮಾಡದಂತೆ ಮತ್ತು ಎಸ್ಐಟಿ ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.
ಕಳೆದ ವಾರ ರೆಡ್ಡಿಯನ್ನು ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಡಿಸೆಂಬರ್ 3ರವರೆಗೆ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಲೋಕಾಯುಕ್ತ ಕೋರ್ಟ್ ಆರೋಪಿಗೆ ಇಂದು ಜಾಮೀನು ನೀಡಿದೆ.
ಬ್ಲಾಕ್ ಬೋರ್ಡ್ ಮೈನ್ಸ್ ಕಂಪನಿ ಹೆಸರಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಮತ್ತು ಅದಿರು ರಫ್ತು ಮಾಡಿದ ಆರೋಪದ ಮೇಲೆ ರೆಡ್ಡಿ ಅವರನ್ನು ಮತ್ತೆ ಬಂಧಿಸಲಾಗಿತ್ತು.