ಚಿತ್ತೂರ್: ಚಿತ್ತೂರ್ ಮೇಯರ್ ಕಟಾರಿ ಅನುರಾಧಾ ಹಾಗೂ ಅವರ ಪತಿ ಕೆ. ಮೋಹನ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ್ ಅಲಿಯಾಸ್ ಚಿಂಟೂ ಸೋಮವಾರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಚಿತ್ತೂರು ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಮುಂದೆ ಶರಣಾದ ಚಿಂಟೂನನ್ನು 14 ದಿನಗಳ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.
ಚಿಂಟೂ ಇಂದು ಕೋರ್ಟ್ ಗೆ ಶರಣಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ವಿಚಾರಣೆಗಾಗಿ ನಮ್ಮ ವಶಕ್ಕೆ ನೀಡವಂತೆ ನಾವು ಮನವಿ ಸಲ್ಲಿಸಿದ ನಂತರ ಕೋರ್ಟ್ 14 ದಿನಗಳ ಕಾಲ ನಮ್ಮ ವಶಕ್ಕೆ ನೀಡಿದೆ ಎಂದು ಚಿತ್ತೂರ್ ಪೊಲೀಸ್ ವರಿಷ್ಠಾಧಿಕಾರಿ ಜಿ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಇದೇ ವೇಳೆ ಕೊಲೆಯಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಚಿಂಟೂ ಬಂಟರಾದ ಮುರುಗಾ, ಮಂಜುನಾಥ್ ಹಾಗೂ ವೆಂಕಟೇಶ್ ಅವರನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಟಾರಿ ಅನುರಾಧಾ ಅವರ ಕೊಲೆ ನಡೆದ ದಿನವೇ ತಲೆಮರೆಸಿಕೊಂಡಿದ್ದ ಚಿಂಟೂ, ಕೊಲೆಯಲ್ಲಿ ತನ್ನ ಪಾತ್ರ ಇಲ್ಲ ಎಂದು ವಾದಿಸುತ್ತಿದ್ದಾನೆ ಎನ್ನಲಾಗಿದೆ.