ತುಮಕೂರು: ಹಿಂದೂಪರ ಸಂಘಟನೆಗಳು ಶುಕ್ರವಾರ ನಡೆಸಿದ ಜಿಲ್ಲಾ ಬಂದ್ ಭಾಗಶಃ ಯಶಸ್ವಿಯಾಯಿತು.
ನಗರದಲ್ಲಿ ಬೆಳಿಗ್ಗೆ 8 ಗಂಟೆ ಹೊತ್ತಿಗೆ ಚರ್ಚ್ ವೃತ್ತದ ಬಳಿ ಸಾರಿಗೆ ನಿಗಮದ ಬಸ್ಗೆ ದುಷ್ಕರ್ಮಿಗಳು ಕಲ್ಲು ತೂರಿದರು. ಬಸ್ನ ಹೆಡ್ ಲೈಟ್, ಇಂಡಿಕೇಟರ್ ಲೈಟ್ ಮತ್ತು ಕಿಟಕಿ ಗಾಜುಗಳು ಪುಡಿಯಾದವು.
ನಂತರ ನಗರದಲ್ಲಿ ಮಧ್ಯಾಹ್ನದವರೆಗೂ ಬಸ್ ಸಂಚಾರ ಪೂರ್ಣ ಸ್ಥಗಿತಗೊಂಡಿತ್ತು. ಮಧ್ಯಾಹ್ನ ಕ್ಯಾತ್ಸಂದ್ರದ ಬಳಿ ಹಿಂದೂಪರ ಸಂಘಟನೆಯ 20ಕ್ಕೂ ಹೆಚ್ಚು ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದಾಗ ಪೊಲೀಸರ ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಬೆಳಿಗ್ಗೆ ಆರಂಭವಾಗಿದ್ದ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು 9 ಗಂಟೆ ಬಳಿಕ ಬಂದ್ ಆದವು. ಪ್ರಮುಖ ರಸ್ತೆಗಳಾದ ಬಿ.ಎಚ್ ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಎಸ್ಎಸ್ಪುರಂ ರಸ್ತೆಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಹಿಂದೂಪರ ಸಂಘಟನೆ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಟೌನ್ ಹಾಲ್ ವೃತ್ತದಲ್ಲಿ ಮೂರು ತಾಸು ಪ್ರತಿಭಟನೆ ನಡೆಸಿದರು. ಸಾಹಿತಿ ಗಿರೀಶ್ ಕಾರ್ನಾಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹನ ಮಾಡಿದರು.
ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ಬಿಕೊ ಎನ್ನುತ್ತಿತ್ತು. ತುಮಕೂರು ಹೊರತುಪಡಿಸಿದರೆ ಜಿಲ್ಲೆಯ ವಿವಿಧೆಡೆ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.