ದಾವಣಗೆರೆ: ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕನೊಬ್ಬ ತನ್ನ ಕರ್ತವ್ಯ ಮರೆತು ಶಾಲೆಯನ್ನೇ ಬಾರ್ ಮಾಡಿಕೊಂಡ ಘಟನೆ ವರದಿಯಾಗಿದೆ. ಇಂಥ ಶಿಕ್ಷಕನ ವರ್ತನೆಗೆ ಬೇಸತ್ತ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಗಿರಿಯಾಪುರ ಗ್ರಾಮದ ಶಿಕ್ಷಕ ಬಸಪ್ಪ ಎಂಬಾತ ಶಾಲೆಗೆ ದಿನ ಕುಡಿದು ಬರುತ್ತಿದ್ದ. ಅಲ್ಲದೇ ಶಾಲೆಯಲ್ಲಿಯೂ ಕುಡಿದು ಎಲ್ಲೆಂದರಲ್ಲಿ ಮದ್ಯದ ಬಾಟಲಿ ಬಿಸಾಡುತ್ತಿದ್ದ. ಶಾಲಾ ಮಕ್ಕಳೇ ಮದ್ಯದ ಬಾಟಲಿ ಎತ್ತಿ ಹೊರ ಹಾಕಬೇಕಿತ್ತು.
ಈ ಕುಡುಕ ಶಿಕ್ಷಕ ತಮ್ಮ ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಕುಡಿಯುವುದನ್ನೇ ಕಾಯಕ ಮಾಡಿಕೊಂಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮದ ಜನ, ಮಕ್ಕಳೊಂದಿಗೆ ಸೇರಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದಾರೆ. ನಮಗೇ ಇಂಥ ಕುಡುಕ ಶಿಕ್ಷಕ ಬೇಡ, ಆತನನ್ನು ವರ್ಗಾಯಿಸಿ ಬೇರೆ ಶಿಕ್ಷಕರನ್ನು ನಿಯೋಜಿಸಿ ಎಂದು ಒತ್ತಾಯಿಸಿದ್ದಾರೆ.