ಬೆಂಗಳೂರು,ಜೂ.16: ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕೇರಳ ಹೈಕೋರ್ಟ್ ನ್ಯಾಯಾಧೀಶರ ಪುತ್ರ ಮೃತಪಟ್ಟಿರುವ ಘಟನೆ ಮೈಕೋಲೇಔಟ್ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕ್ರೈಸ್ಟ್ ಕಾಲೇಜಿನ ಕಾನೂನು ವಿದ್ಯಾರ್ಥಿ ಆನಂದ್ ಮ್ಯಾಥ್ಯೂ(22) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಜಯನಗರದಲ್ಲಿ ವಾಸವಿದ್ದ ಆನಂದ್ ಮ್ಯಾಥ್ಯೂ ಮೂಲತಃ ಕೇರಳದವರಾಗಿದ್ದು, ಕ್ರೈಸ್ಟ್ ಕಾಲೇಜಿನಲ್ಲಿ ಎಲ್ಎಲ್ಬಿ 4ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದರು. ರಾತ್ರಿ 10 ಗಂಟೆಯಲ್ಲಿ ಸ್ನೇಹಿತನ ಬೈಕ್ನಲ್ಲಿ ಹೊರಗೆ ತೆರಳಿ ಸುದ್ದಗುಂಟೆಪಾಳ್ಯ ರಸ್ತೆಯಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಮತ್ತೊಂದು ಬೈಕ್ ಇವರ ಬೈಕ್ಗೆ ಗುದ್ದಿದ್ದರಿಂದ ಎರಡೂ ಬೈಕ್ನಲ್ಲಿದ್ದ ನಾಲ್ವರೂ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಗಂಭೀರ ಗಾಯಗೊಂಡ ಆನಂದ್ ಮ್ಯಾಥ್ಯೂ ಅವರನ್ನು ತಕ್ಷಣ ಸೆಂಟ್ಜಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮುಂಜಾನೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನುಳಿದ ಮೂವರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಆನಂದ್ ಮ್ಯಾಥ್ಯೂ ಕೇರಳ ಹೈಕೋರ್ಟ್ ಜಡ್ಜ್ ಬಾಬು ಮ್ಯಾಥ್ಯೂ ಅವರ ಪುತ್ರ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎ.ಸಲೀಂ ಈ ಸಂಜೆಗೆ ತಿಳಿಸಿದ್ದಾರೆ. ಮೈಕೋಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.