ಕರ್ನಾಟಕ

ನಟ ಯಶ್ ಕುಟುಂಬದವರಿಂದ ಬೆದರಿಕೆ: ಮನೆ ಮಾಲೀಕರಿಗೆ ಪ್ರಾಣ ಭೀತಿ

Pinterest LinkedIn Tumblr

yash

ಬೆಂಗಳೂರು, ಜೂ.16: ನಟ ಯಶ್ ಕುಟುಂಬದವರು ಬಾಡಿಗೆಗೆ ಪಡೆದಿರುವ ಕತ್ರಿಗುಪ್ಪೆಯಲ್ಲಿರುವ ನಮ್ಮ ಮನೆಯನ್ನು ಒಪ್ಪಂದದ ಅವಧಿ ಮುಗಿದರೂ ತೆರವುಗೊಳಿಸುತ್ತಿಲ್ಲ, ಬಾಡಿಗೆಯನ್ನೂ ಕೊಡುತ್ತಿಲ್ಲ, ಮಾತ್ರವಲ್ಲ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನೆಯ ಮಾಲೀಕರಾದ ವನಜಾ ಕಂದ್ಲೂರಿ ಮತ್ತು ಡಾ. ಮುನಿಪ್ರಸಾದ್ ಆರೋಪಿಸಿದ್ದಾರೆ.

ಕಳೆದ 5 ವರ್ಷಗಳ ಹಿಂದೆ ಯಶ್ ಕುಟುಂಬ ನಮ್ಮ ಮನೆಯನ್ನು ತಿಂಗಳಿಗೆ 40 ಸಾವಿರ ರೂ. ಬಾಡಿಗೆಗೆ ಪಡೆದಿದೆ. ನಾವು ಯಶ್ ಅವರ ಮುಖ ನೋಡಿ ಅಂದು ಬಾಡಿಗೆಗೆ ನೀಡಿದ್ದೆವು. ಆದರೆ, ಇಂದು ಅವರ ತಾಯಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಮಾತ್ರವಲ್ಲ ಮನೆ ಖಾಲಿ ಮಾಡುವುದಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಯಶ್ ಇದುವರೆಗೆ ನಮ್ಮೊಂದಿಗೆ ಯಾವುದೇ ಕೆಟ್ಟ ರೀತಿಯಲ್ಲಿ ಮಾತನಾಡಿಲ್ಲ. ಆದರೆ ಅವರು ನಮ್ಮ ಕರೆ ಸ್ವೀಕರಿಸುತ್ತಿಲ್ಲ ಎಂದು ವನಜಾ ಪತ್ರಿಕಾಗೋಷ್ಠಿಯಲ್ಲಿಂದು ಆರೋಪಿಸಿದರು.

2013ರವರೆಗೆ ಪ್ರತಿ ತಿಂಗಳು 40 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಅದಾದ ಬಳಿಕ ಬಾಡಿಗೆಯನ್ನು 46 ಸಾವಿರ ರೂ.ಗೆ ನಾವು ಹೆಚ್ಚಿಸಿದ್ದೆವು. ಆದರೆ ಕಳೆದ ಒಂದೂವರೆ ವರ್ಷದಿಂದ ಬಾಡಿಗೆಯನ್ನೂ ಕೊಟ್ಟಿಲ್ಲ, ಮನೆಯನ್ನೂ ಖಾಲಿ ಮಾಡುತ್ತಿಲ್ಲ, ಈ ಮನೆಗೆ ಬಂದ ಮೇಲೆ ಯಶ್ ಚಿತ್ರರಂಗದಲ್ಲಿ ಬೆಳೆದಿದ್ದಾರೆ. ಆದ್ದರಿಂದ ಅವರಿಗೆ ಮನೆ ಮೇಲೆ ಭಾವನಾತ್ಮಕ ಪ್ರೀತಿ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಒಬ್ಬ ನಾಯಕ ನಟನಿಗೆ ಸ್ವಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕೇ ಹೊರತು ಬೇರೆಯವರ ಮನೆಯ ಮೇಲೆ ಪ್ರೀತಿ ಇಟ್ಟುಕೊಳ್ಳಬಾರದು. ನನಗೂ ಕೂಡ ನನ್ನ ಮನೆಯ ಮೇಲೆ ಭಾವನಾತ್ಮಕ ಸಂಬಂಧವಿದೆ. ನನ್ನ ಮಗಳಿಗೂ ಮದುವೆ ಮಾಡಿಸಬೇಕಿದೆ. ಆದಷ್ಟು ಬೇಗ ಮನೆ ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

3 ವರ್ಷದ ಹಿಂದೆಯೇ ಮನೆ ಖಾಲಿ ಮಾಡುವಂತೆ ವಿನಂತಿಸಿದ್ದೆವು, ಆದರೂ ಯಶ್ ಹುಟ್ಟುಹಬ್ಬ, ತಂಗಿಯ ಮದುವೆ ಮುಂತಾದ ಕಾರಣಗಳನ್ನು ಮುಂದಿಟ್ಟು ಮನೆ ಖಾಲಿ ಮಾಡುವುದನ್ನು ಮುಂದೂಡಿದ್ದರು. ಆದರೆ ಇತ್ತೀಚೆಗೆ ಬಾಡಿಗೆಯನ್ನೂ ಕೊಡದೆ, ಫೋನ್ ಕರೆಯನ್ನೂ ಸ್ವೀಕರಿಸದೆ ಮೋಸ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ.

ನಮ್ಮ ಮನೆಯನ್ನು ನಮಗೆ ಹಿಂದಿರುಗಿಸಿದರೆ ನ್ಯಾಯಾಲಯದಿಂದ ಪ್ರಕರಣವನ್ನು ಹಿಂದಕ್ಕೆ ಪಡೆದು ಒಪ್ಪಂದ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ. ನಮಗೆ ಯಶ್ ವಿರುದ್ಧ ಯಾವುದೇ ಆರೋಪವಿಲ್ಲ. ನಮ್ಮ ಮನೆ ನಮಗೆ ಸಿಗಬೇಕು ಅಷ್ಟೇ ಎಂದು ಹೇಳಿದರು.

ಐದೂವರೆ ಕೋಟಿ ರೂ.ಗೆ ಈ ಮನೆಯನ್ನು ಖರೀದಿಸಿರುವುದಾಗಿ ಯಶ್ ಕುಟುಂಬದವರು ಹೊರಗೆ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದುದು. ಈ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಅವರ ತಾಯಿ ನನ್ನನ್ನು ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾರೆ ಎಂದು ವನಜಾ ಆರೋಪಿಸಿದರು.

Write A Comment