ಬೆಂಗಳೂರು: ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರೇ ಎಡಿಜಿಪಿ ಅಲೋಕ್ ಕುಮಾರ್ಗೆ ಲಾಟರಿ ಕಿಂಗ್ಪಿನ್ ಪಾರಿ ರಾಜನ್ ಅವರನ್ನು ಪರಿಚಯಿಸಿದ್ದು ಎಂಬ ಸ್ಫೋಟಕ ಮಾಹಿತಿಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಸಿಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಇನ್ನು ಇಷ್ಟು ಹಗರಣ ನಡೆದರೂ ಗೃಹಸಚಿವರು, ಸಿಎಂ ಯಾಕೆ ಅಧಿಕಾರಿಗಳನ್ನು ಅಮಾನತು ಮಾಡಿಲ್ಲ. ನೀವು ಪಾರಿ ರಾಜನ್ ಎನ್ನುವ ದಲಿತನಿಗೆ ರಕ್ಷಣೆ ನೀಡುತ್ತಿದ್ದೀರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ
ಲಾಟರಿ ದಂಧೆಯಲ್ಲಿ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡದೇ ಅಂಥವರನ್ನು ಹೆಚ್ಚುವರಿ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ರಾಜ್ಯದಲ್ಲಿ ಒಂದಂಕಿ ಲಾಟರಿ ಹೇಗೆ ನಡೆಯುತ್ತದೆ ಎಂಬುದನ್ನು ಕಲಾಪದಲ್ಲೇ ಹೇಳಿದ್ದೆ. ಆಗ ಕೆಲವರು ನನಗೆ ಕೆಲಸ ಇಲ್ಲ ಎಂದರು. ಅಧಿವೇಶನದಲ್ಲಿ ಲಾಟರಿ ಟಿಕೆಟ್ ತೊರಿಸಿದೆ. ಆದರೂ ಯಾರೂ ನನ್ನ ಮಾತು ಕೇಳಲಿಲ್ಲ. ಮೈಸೂರು ಬಸ್ನಲ್ಲಿ ಹಣ ಸಿಕ್ಕ ಪ್ರಕರಣವನ್ನು ಗೃಹಸಚಿವರು ಮುಚ್ಚಿಹಾಕಿದರು. ಅದರಲ್ಲಿ ಹಣ ಬಾಚಿಕೊಂಡ ಐಜಿಪಿಗೆ ಬೆಂಗಳೂರಿನಲ್ಲಿ ಒಳ್ಳೆ ಹುದ್ದೆ ಕೊಟ್ಟಿದ್ದಾರೆ. ಯಾಕೆ ಅಂದರೆ ಅದು ಗೃಹಸಚಿವರಿಗೆ ಬೇಕಾದ ಹಣ. ಹೀಗಾಗಿ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಿಐಡಿ ವರದಿಯಿಂದಲೇ ರಾಜ್ಯಪಾಲರು ಸರ್ಕಾರವನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ ಅವರು ಇಲ್ಲಿನ ಜನ ಸಮಸ್ಯೆಗಳಿಂದ ಒದ್ದಾಡುತ್ತಿದ್ದರೆ ದೆಹಲಿಯಲ್ಲಿ ಸಿಎಂ ಅಂಡ್ ಟೀಂಗೆ ರಕ್ಷಣೆ ಕೊಡುವವರಿಗೂ ದಕ್ಷಿಣೆ ಕೊಡಲು ಹೋಗಿದ್ದಾರೆ. ಲಾಟರಿ ಹಗರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಲಾಟರಿ ಒಂದೇ ಅಲ್ಲ, ಐಪಿಎಲ್ ದಂಧೆಯೂ ನಡೆಯುತ್ತಿದೆ. ಒಂದೊಂದು ಮ್ಯಾಚ್ಗೆ 3 ಸಾವಿರ ಕೋಟಿ ದಂಧೆ ನಡೆದಿದೆ ಎಂದು ಎಚ್ಡಿಕೆ ಗಂಭೀರ ಆರೋಪ ಮಾಡಿದ್ದಾರೆ.