ಮಂಗಳೂರು: ಜಾಗೃತ ಹಾಗೂ ಸುಸಂಸ್ಕೃತ ಸಮಾಜಕ್ಕೆ ಕರ್ತವ್ಯ ಪ್ರಜ್ಞೆ ಮೂಡಿಸುವ ಸಾಹಿತ್ಯಗಳ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕುಡ್ಲ ಧ್ವನಿ ಪ್ರತಿಷ್ಠಾನ ಘಟಕದ ಜಂಟಿ ಆಶ್ರಯದಲ್ಲಿ ಶನಿವಾರ ನಗರದ ಅಕಾಡೆಮಿ ಕಚೇರಿಯಲ್ಲಿ ಏರ್ಪಡಿಸಿದ್ದ ದುಬೈ ಉದ್ಯಮಿ ಹಾಗೂ ದ್ವಾನಿ ಪ್ರತಿಷ್ಠಾನ ಯುಎಇ ಇದರ ಅಧ್ಯಕ್ಷರಾದ ಪ್ರಕಾಶ್ ರಾವ್ ಪಯ್ಯಾರ್ ಅವರ “ಉರೆತ್ತ ಕಣ್ಣ್ದ ಸಿರಿ’ ಕವನ ಸಂಕಲನ ಅನಾವರಣಗೊಳಿಸಿ ಅವರು ಮಾತನಾಡಿದರು.
ಸಾಹಿತಿಗಳು ಸಮಾಜದ ವೈರುಧ್ಯವನ್ನು ಬಿಂಬಿಸುವುದರೊಂದಿಗೆ ಇಲ್ಲಿನ ಓರೆಕೋರೆ ತಿದ್ದುವ ಕಾರ್ಯವನ್ನೂ ಮಾಡಬೇಕು. ಮನಸ್ಸುಗಳನ್ನು ವಿಘಟಿಸುವ ಪ್ರವೃತ್ತಿಯ ಹಕ್ಕುಗಳ ಪ್ರತಿಪಾದನೆಗಿಂತ ಧನಾತ್ಮಕ ಚಿಂತನೆ ಬೆಳೆಸಿಕೊಂಡು ತಮ್ಮ ಜವಾಬ್ದಾರಿ ಪೂರೈಸಬೇಕು ಎಂದರು.
ಎನ್ನೆಸ್ಸೆಸ್ನ ರಾಜ್ಯ ಘಟಕ ಯೋಜನಾಧಿಕಾರಿ ಡಾ| ಗಣನಾಥ ಎಕ್ಕಾರ್ ಮಾತನಾಡಿ, ಸಂಪದ್ಭರಿತ ತುಳು ಭಾಷಾ ಸಂಸ್ಕೃತಿ ಕೃತಿಕಾರರಿಂದ ಪ್ರಸ್ತುತವಾಗಿಯೂ ಉಜ್ವಲವಾಗಿ ಬೆಳೆಯುತ್ತಿದೆ ಎಂದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಪುತ್ತೂರು ಕ.ಸಾ.ಪ. ಅಧ್ಯಕ್ಷ ಡಾ| ವರದರಾಜ ಚಂದ್ರಗಿರಿ, ಅಬುದಾಬಿಯ ತುಳು ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಡೆಮಾರ್ ಕೃತಿ ಪರಿಚಯ ಮಾಡಿದರು. ಪರಮಾನಂದ ಸಾಲ್ಯಾನ್ ಪ್ರಸ್ತಾವಿಸಿದರು. ಪ್ರಕಾಶ್ ರಾವ್ ಪಯ್ಯಾರ್ ಸ್ವಾಗತಿಸಿ, ಮಂಜುಳಾ ಶೆಟ್ಟಿ ನಿರೂಪಿಸಿದರು. ಸುಮನ್ ಶೆಟ್ಟಿ ಪ್ರಾರ್ಥಿಸಿದರು.