ಕರ್ನಾಟಕ

ಚರ್ಚ್‌ ಸ್ಟ್ರೀಟ್‌ನಲ್ಲಿ ಗಾಳಿಪಟ ಉತ್ಸವ: ಆತಂಕ ದೂರ ಮಾಡಿದ ಸಂಭ್ರಮ

Pinterest LinkedIn Tumblr

kite

ಬೆಂಗಳೂರು: ಬಾಂಬ್‌ ಸ್ಫೋಟ­ದಿಂದಾಗಿ ತಲ್ಲಣಗೊಂಡಿದ್ದ ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿ ಶನಿವಾರ ಸಂಜೆ ಸಂಭ್ರಮ ಮನೆ ಮಾಡಿತ್ತು. ಎಲ್ಲಾ ಆತಂಕಗಳನ್ನು ಮರೆತು ಜನರು ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸಿದರು.

‘ಬೆಂಗಳೂರು ನೀಡ್ಸ್‌ ಯು’ ಸಂಘಟನೆ ವತಿಯಿಂದ ಆಯೋಜಿಸಲಾ­ಗಿದ್ದ ಗಾಳಿಪಟ ಉತ್ಸವದಲ್ಲಿ ಚರ್ಚ್‌ ಸ್ಟ್ರೀಟ್‌ನ ವ್ಯಾಪಾರಿಗಳು, ಉದ್ಯಮಿ­ಗಳು, ರೆಸ್ಟೋರೆಂಟ್‌ಗಳ ಮಾಲೀಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಗರದ ವಿವಿಧ ಭಾಗಗಳ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ.­ರಾಜೀವ್‌ಗೌಡ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ,  ‘ನನ್ನ ಕಚೇರಿ ಸಹ ಚರ್ಚ್‌ ಸ್ಟ್ರೀಟ್‌ನಲ್ಲಿದೆ. ಸದಾ ಜನ­ರಿಂದ ಕೂಡಿರುತ್ತಿದ್ದ ಈ ರಸ್ತೆ ಕೆಲ ದಿನಗಳಿಂದ ಕಳೆಗುಂದಿತ್ತು. ಭಯದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲರೂ ಒಟ್ಟಿಗೆ ಸೇರಿ ಕಹಿ ಘಟನೆ­ಯನ್ನು ಮರೆಯುವ ಉದ್ದೇಶದಿಂದ ಈ ಗಾಳಿಪಟ ಉತ್ಸವ ಆಯೋಜಿಸ­ಲಾಗಿದೆ’ ಎಂದರು.

‘ಸ್ಫೋಟದ ನಂತರ ಚರ್ಚ್‌ ಸ್ಟ್ರೀಟ್‌ಗೆ ಬರಲು ಭಯವಾಗುತ್ತಿತ್ತು. ಯಾರೋ ಎಸಗುವ ಕೃತ್ಯಕ್ಕೆ ಅಮಾ­ಯಕರು ಬಲಿಯಾಗುತ್ತಾರೆ.  ಇಂತಹ ಘಟನೆಗಳು ಮತ್ತೆ ನಗರದಲ್ಲಿ ಮರುಕಳಿ­ಸಬಾರದು.

ಎಲ್ಲರೂ ಒಂದೆಡೆ ಸೇರಿ ಇಂತಹ ಉತ್ಸವಗಳಲ್ಲಿ ಪಾಲ್ಗೊಂಡಾಗ ಮಾತ್ರ ಕಹಿ ಘಟನೆಗಳನ್ನು ಮರೆಯಲು ಸಾಧ್ಯ’ ಎಂದು ಉತ್ಸವದಲ್ಲಿ ಪಾಲ್ಗೊಂಡಿದ್ದ ಕೃತಿ ಹೇಳಿದರು.

ಚರ್ಚ್‌ ಸ್ಟ್ರೀಟ್‌ನ ಬ್ರಿಗೇಡ್ ಗಾರ್ಡನ್‌, ಮಾಲಿನ್ಯ ನಿಯಂತ್ರಣ ಮಂಡಳಿ, ಎಸ್‌ಬಿಐ ಬ್ಯಾಂಕ್‌ ಕಟ್ಟಡ, ಸಿಟಿ ಸೆಂಟರ್‌ ಸೇರಿದಂತೆ ಹಲವು ಕಟ್ಟಡಗಳ ಮೇಲ್ಬಾಗದಿಂದ ಗಾಳಿಪಟ­ಗಳನ್ನು ಹಾರಿಸಲಾಯಿತು.

Write A Comment