ಬೆಂಗಳೂರು: ಬಾಂಬ್ ಸ್ಫೋಟದಿಂದಾಗಿ ತಲ್ಲಣಗೊಂಡಿದ್ದ ನಗರದ ಚರ್ಚ್ ಸ್ಟ್ರೀಟ್ನಲ್ಲಿ ಶನಿವಾರ ಸಂಜೆ ಸಂಭ್ರಮ ಮನೆ ಮಾಡಿತ್ತು. ಎಲ್ಲಾ ಆತಂಕಗಳನ್ನು ಮರೆತು ಜನರು ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸಿದರು.
‘ಬೆಂಗಳೂರು ನೀಡ್ಸ್ ಯು’ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಗಾಳಿಪಟ ಉತ್ಸವದಲ್ಲಿ ಚರ್ಚ್ ಸ್ಟ್ರೀಟ್ನ ವ್ಯಾಪಾರಿಗಳು, ಉದ್ಯಮಿಗಳು, ರೆಸ್ಟೋರೆಂಟ್ಗಳ ಮಾಲೀಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಗರದ ವಿವಿಧ ಭಾಗಗಳ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ.ರಾಜೀವ್ಗೌಡ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ, ‘ನನ್ನ ಕಚೇರಿ ಸಹ ಚರ್ಚ್ ಸ್ಟ್ರೀಟ್ನಲ್ಲಿದೆ. ಸದಾ ಜನರಿಂದ ಕೂಡಿರುತ್ತಿದ್ದ ಈ ರಸ್ತೆ ಕೆಲ ದಿನಗಳಿಂದ ಕಳೆಗುಂದಿತ್ತು. ಭಯದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲರೂ ಒಟ್ಟಿಗೆ ಸೇರಿ ಕಹಿ ಘಟನೆಯನ್ನು ಮರೆಯುವ ಉದ್ದೇಶದಿಂದ ಈ ಗಾಳಿಪಟ ಉತ್ಸವ ಆಯೋಜಿಸಲಾಗಿದೆ’ ಎಂದರು.
‘ಸ್ಫೋಟದ ನಂತರ ಚರ್ಚ್ ಸ್ಟ್ರೀಟ್ಗೆ ಬರಲು ಭಯವಾಗುತ್ತಿತ್ತು. ಯಾರೋ ಎಸಗುವ ಕೃತ್ಯಕ್ಕೆ ಅಮಾಯಕರು ಬಲಿಯಾಗುತ್ತಾರೆ. ಇಂತಹ ಘಟನೆಗಳು ಮತ್ತೆ ನಗರದಲ್ಲಿ ಮರುಕಳಿಸಬಾರದು.
ಎಲ್ಲರೂ ಒಂದೆಡೆ ಸೇರಿ ಇಂತಹ ಉತ್ಸವಗಳಲ್ಲಿ ಪಾಲ್ಗೊಂಡಾಗ ಮಾತ್ರ ಕಹಿ ಘಟನೆಗಳನ್ನು ಮರೆಯಲು ಸಾಧ್ಯ’ ಎಂದು ಉತ್ಸವದಲ್ಲಿ ಪಾಲ್ಗೊಂಡಿದ್ದ ಕೃತಿ ಹೇಳಿದರು.
ಚರ್ಚ್ ಸ್ಟ್ರೀಟ್ನ ಬ್ರಿಗೇಡ್ ಗಾರ್ಡನ್, ಮಾಲಿನ್ಯ ನಿಯಂತ್ರಣ ಮಂಡಳಿ, ಎಸ್ಬಿಐ ಬ್ಯಾಂಕ್ ಕಟ್ಟಡ, ಸಿಟಿ ಸೆಂಟರ್ ಸೇರಿದಂತೆ ಹಲವು ಕಟ್ಟಡಗಳ ಮೇಲ್ಬಾಗದಿಂದ ಗಾಳಿಪಟಗಳನ್ನು ಹಾರಿಸಲಾಯಿತು.