ಬೆಂಗಳೂರು: ‘ಪಿಕೆ’ ಸಿನಿಮಾ ಉತ್ತಮವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಬಿಡುಗಡೆಯಾದಾಗಲೇ ತೆರಿಗೆ ವಿನಾಯಿತಿ ನೀಡಬೇಕಿತ್ತು’ ಎಂದು ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅಭಿಪ್ರಾಯಪಟ್ಟರು. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ನಗರದಲ್ಲಿ ಶನಿವಾರ ಆಯೋ ಜಿಸಿದ್ದ ‘ಪಿಕೆ ಸಿನಿಮಾ ಕುರಿತ ಸಂವಾದ’ದಲ್ಲಿ ಅವರು ಮಾತನಾಡಿದರು.
‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವೈಚಾರಿಕ ಚಿತ್ರ ನಿರ್ಮಿಸಿದವರನ್ನು ಅಭಿನಂದಿಸಬೇಕು. ತಮ್ಮ ಖ್ಯಾತಿಯನ್ನು ಅಪಾಯಕ್ಕೆ ಒಡ್ಡಿದ ಅಮೀರ್ಖಾನ್ ಅವರ ಧೈರ್ಯವನ್ನು ಮೆಚ್ಚಬೇಕು. ಇದೇ ಪಾತ್ರವನ್ನು ಹಿಂದೂ ನಟ ಮಾಡಿದ್ದರೆ ಇಂತಹ ಆಕ್ಷೇಪಗಳು ವ್ಯಕ್ತವಾಗುತ್ತಿರಲಿಲ್ಲ’ ಎಂದು ಹೇಳಿದರು.
‘ಹಿಂದಿನಿಂದಲೇ ಆಷಾಢಭೂತಿಗಳು ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಅದನ್ನು ಈ ಪಿಕೆ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಈ ಚಿತ್ರವನ್ನು ಜನರು ನೋಡಲು ಅವಕಾಶ ಸಿಗಬೇಕು. ಆದರೆ, ಗೂಂಡಾಗಿರಿ ಮೂಲಕ ಚಿತ್ರಕ್ಕೆ ತಡೆಯೊಡ್ಡುವ ಯತ್ನಗಳು ನಡೆಯುತ್ತಿವೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಮುಖ್ಯ’ ಎಂದು ತಿಳಿಸಿದರು.
‘ಸಂಗೀತ, ನಾಟಕ, ಸಿನಿಮಾ ಸೇರಿದಂತೆ ಯಾವುದೇ ಸೃಜನಶೀಲ ಕಲೆಯೊಂದನ್ನು ಜನರು ಒಂದಾಗಿ ಕಲೆತು ಆಸ್ವಾದಿಸಬೇಕು. ನಮ್ಮಲ್ಲಿ ಆ ಸ್ಥಿತಿ ಇಲ್ಲ. ಭದ್ರತೆ ಒದಗಿಸಬೇಕಾದ ಪೊಲೀಸರೇ ಗಲಾಟೆ ನೆಪ ಒಡ್ಡಿ ಮೊದಲು ಇಂತಹವುಗಳನ್ನು ನಿರ್ಬಂಧಿಸುತ್ತಾರೆ. ಈ ರೀತಿಯ ಮೂರ್ಖ ಸಂಸ್ಕೃತಿ ನಮ್ಮಲ್ಲಿ ಮಾತ್ರ ಇದೆ’ ಎಂದರು.
‘ಭಗವದ್ಗೀತೆಯಲ್ಲಿ ಇರುವುದೆಲ್ಲ ಪೂರ್ತಿ ಸತ್ಯ ಎನ್ನುವುದಾದರೆ ನಮ್ಮ ಸಂಸ್ಕೃತಿ ಅದರ ತರುವಾಯ ಬೆಳವಣಿಗೆ ಹೊಂದಿಲ್ಲ ಎನ್ನಬೇಕಾಗುತ್ತದೆ. 2000 ಸಾವಿರ ವರ್ಷಗಳ ಇತಿಹಾಸದಲ್ಲಿ ಹೊಸ ವಿಚಾರಗಳು ಹುಟ್ಟಿಲ್ಲವೆ’ ಎಂದು ಪ್ರಶ್ನಿಸಿದರು.
‘ಗಣಪತಿ ಮುಖ ಶಸ್ತ್ರಚಿಕಿತ್ಸೆಯಿಂದ ಕಸಿ ಮಾಡಲಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ದೇಶದಲ್ಲಿ ವಿಮಾನಗಳು ಹಾರಾಡುತ್ತಿದ್ದವು ಎನ್ನುವಂತಹ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ. ಇವು ನಮ್ಮ ಸಂಸ್ಕೃತಿಗೆ ನಾವೇ ಅವಹೇಳನ ಮಾಡುವ ಮಾತುಗಳಾಗಿವೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ವಿಮರ್ಶಕ ಡಾ.ಕೆ.ಮರುಸಿದ್ದಪ್ಪ ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನ ಮಾಡುವುದು ಪ್ರಜಾಪ್ರಭುತ್ವವನ್ನು ಪತನ ಮಾಡಿದಂತೆ. ಆದ್ದರಿಂದ, ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಜ್ಞಾವಂತರು ಮಾತ್ರವಲ್ಲ ಪ್ರತಿಯೊಬ್ಬರು ಕೈಜೋಡಿಸಬೇಕು. ಇಲ್ಲದಿದ್ದರೆ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದಾದ ಅನಾಹುತಗಳು ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
1 Comment
E girish karnad … madoke bere kelsa illa, kaddi elli alladisli anta kaytirtane…..pracharada hucchu, …