ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಮತ್ತು ಮೈಸೂರು ನಗರ ಸಾರಿಗೆಯಲ್ಲಿ ಸಂಚರಿಸುತ್ತಿರುವ 1೪2 ಮಾರ್ಕೊಪೋಲೊ ಬಸ್ಗಳನ್ನು ಗುಜರಿಗೆ ಹಾಕುವ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡಿದೆ. ಈ ಬಸ್ಗಳ ಖರೀದಿ ಬಗ್ಗೆ ತನಿಖೆಗೂ ತೀರ್ಮಾನಿಸಲಾಗಿದೆ.
೨೦೦೯ರಲ್ಲಿ ಬಿಎಂಟಿಸಿ ಬಳಕೆಗಾಗಿ ಖರೀದಿಸಿರುವ ೯೮ ಹವಾನಿಯಂತ್ರಿತ ಮಾರ್ಕೊಪೋಲೊ ಬಸ್ಗಳು ಮತ್ತು ಮೈಸೂರಿನಲ್ಲಿ ಸಂಚಾರಕ್ಕಾಗಿ ಅದೇ ವರ್ಷ ಖರೀದಿಸಿದ್ದ ಹವಾನಿಯಂತ್ರಿತವಲ್ಲದ ೪೪ ಮಾರ್ಕೊಪೋಲೊ ಬಸ್ಗಳು ಗುಜರಿಗೆ ಹೋಗಲಿವೆ.
ಬಿಎಂಟಿಸಿಯ 98 ಮಾರ್ಕೊಪೋಲೊ ಬಸ್ಗಳನ್ನು ಮಾತ್ರ ಗುಜರಿಗೆ ಹಾಕುವ ಪ್ರಸ್ತಾವ ಶುಕ್ರವಾರದ ಸಂಪುಟ ಸಭೆಯ ಮುಂದಿತ್ತು. ಈ ವಿಷಯ ಚರ್ಚೆಗೆ ಬಂದಾಗ ಮೈಸೂರಿನಲ್ಲಿ ಸಂಚರಿಸುತ್ತಿರುವ ೪4 ಬಸ್ಗಳ ವಿಷಯವೂ ಪ್ರಸ್ತಾಪವಾಗಿದೆ. ಒಟ್ಟು 1೪2 ಬಸ್ಗಳನ್ನೂ ಗುಜರಿಗೆ ಕಳುಹಿಸಲು ಸಂಪುಟ ನಿರ್ಣಯ ಕೈಗೊಂಡಿದೆ.
ಸಂಪುಟ ಸಭೆ ಬಳಿಕ ವಿವರ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜೆನರ್ಮ್ ಯೋಜನೆಯಡಿ ಪ್ರತಿ ಬಸ್ಗೆ ₨ 31 ಲಕ್ಷ ನೀಡಿ ಖರೀದಿಸಲಾಗಿತ್ತು. ಈ ಬಸ್ಗಳಿಂದ ತಿಂಗಳಿಗೆ ₨ 1.56 ಕೋಟಿ ನಷ್ಟ ಆಗುತ್ತಿದೆ. ಹೀಗೆಯೇ ಮುಂದುವರಿದರೆ ಒಂದು ವರ್ಷದಲ್ಲಿ ನಷ್ಟದ ಪ್ರಮಾಣ ₨ 67 ಕೋಟಿ ತಲುಪಬಹುದು ಎಂದು ಅಂದಾಜು ಮಾಡಲಾಗಿತ್ತು ಎಂದರು.
‘ಮಾರ್ಕೊಪೋಲೊ ಬಸ್ಗಳು ನಿತ್ಯವೂ ಕೆಟ್ಟು ನಿಲ್ಲುತ್ತಿವೆ. ತಾಂತ್ರಿಕ ಗುಣಮಟ್ಟವೂ ಇಲ್ಲ. ದುರಸ್ತಿ ಮಾಡಿ, ಮತ್ತೆ ಸಂಚಾರಕ್ಕೆ ಬಿಟ್ಟರೂ ನಷ್ಟ ಖಚಿತ. ಈ ಕಾರಣದಿಂದಾಗಿಯೇ ಮಾರ್ಕೊಪೋಲೊ ಬಸ್ಗಳನ್ನು ಸಂಚಾರದಿಂದ ಹಿಂದಕ್ಕೆ ಪಡೆದು ಗುಜರಿಗೆ ಕಳುಹಿಸುವ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಹೇಳಿದರು.
ಬೆಂಗಳೂರಿನ ರಸ್ತೆಗಳಿಗೆ ಈ ಬಸ್ಗಳು ಸರಿ ಹೊಂದುವುದಿಲ್ಲ. ಆದರೂ ಏಕೆ ಖರೀದಿ ಮಾಡಲಾಗಿದೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಜೆನರ್ಮ್ ಯೋಜನೆಯಡಿ ಇದೇ ಬಸ್ಗಳ ಖರೀದಿಗೆ ಒತ್ತಡವಿತ್ತು ಎನ್ನಲಾಗಿದೆ. ಆ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು.
ವಿಚಾರಣೆಗೆ ಒತ್ತಾಯ: ರಾಜ್ಯದ ರಸ್ತೆ ಸಾರಿಗೆ ನಿಗಮಗಳ ನಷ್ಟಕ್ಕೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಆರ್. ಅಶೋಕ ಅವರು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಮಾರ್ಕೊಪೋಲೊ ಬಸ್ಗಳನ್ನು ಖರೀದಿಸಿದ ಕುರಿತೂ ವಿಚಾರಣೆ ನಡೆಸಬೇಕು. ಈ ಬಸ್ಗಳಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದೆ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಉನ್ನತಮಟ್ಟದ ಸಮಿತಿ
ಬೆಂಗಳೂರಿನ ಸುತ್ತ ಇರುವ ಪಟ್ಟಣಗಳನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೆರವಿನಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವವಿದೆ. ಅದಕ್ಕಾಗಿ ನೀಲನಕ್ಷೆ ರೂಪಿಸಲು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಉನ್ನತಮಟ್ಟದ ಸಮಿತಿ ಮತ್ತು ಒಂದು ಚಾಲನಾ ಸಮಿತಿ ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಜಯಚಂದ್ರ ತಿಳಿಸಿದರು.
ಟರ್ಫ್ ಕ್ಲಬ್: ನಿರ್ಧಾರ ಬದಲಿಲ್ಲ
‘ಬೆಂಗಳೂರು ಟರ್ಫ್ ಕ್ಲಬ್ (ರೇಸ್ ಕೋರ್ಸ್) ಅನ್ನು ನಗರದಿಂದ ಹೊರಕ್ಕೆ ಸ್ಥಳಾಂತರಿಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಇದೇ 13ರಂದು ಸುಪ್ರೀಂಕೋರ್ಟ್ಗೆ ತಿಳಿಸಲಾಗುವುದು’ ಎಂದು ಸಚಿವ ಜಯಚಂದ್ರ ತಿಳಿಸಿದರು.
ಟರ್ಫ್ ಕ್ಲಬ್ ಸ್ಥಳಾಂತರಕ್ಕೆ ಹಿಂದೆಯೇ ನಿರ್ಧಾರ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಕ್ಲಬ್ ಆಡಳಿತ ಮಂಡಳಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆದರೆ, ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ನಂತರ ಕ್ಲಬ್ ಆಡಳಿತ ಮಂಡಳಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಜನವರಿ 13ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಆಗ ಸರ್ಕಾರ ನಿಲುವು ಸ್ಪಷ್ಟಪಡಿಸಬೇಕಿದೆ ಎಂದರು.
‘ಪ್ರಕರಣದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಟರ್ಫ್ ಕ್ಲಬ್ ಸ್ಥಳಾಂತರದ ವಿಷಯದಲ್ಲಿ ನಿರ್ಧಾರ ಬದಲಿಸುವುದಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ಗೆ ತಿಳಿಸಲು ತೀರ್ಮಾನಿಸಲಾಯಿತು’ ಎಂದು ಹೇಳಿದರು.